ತಾಕತ್ತಿದ್ರೆ ನನ್ನ ವಿರುದ್ದ ಕೇಸು ಹಾಕಿ, ದೇವೇಗೌಡ
ದಿನಕ್ಕೊಂದು ಹೇಳಿಕೆ ನೀಡಿ ಜಾರಿಕೊಳ್ಳಬಹುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭಾವಿಸಿರಬಹುದು. ಸತ್ಯವನ್ನು ಹೆಚ್ಚು ದಿನ ಮುಚ್ಚಿಡಲು ಸಾಧ್ಯವಿಲ್ಲ. ನೈಸ್ ಹಗರಣ ಜೀವಂತವಾಗಿಟ್ಟುಕೊಂಡು ರಾಜಕಾರಣ ಮಾಡುವ ಅನಿವಾರ್ಯತೆ ತಮಗೆ ಅಥವಾ ಕುಟುಂಬ ಸದಸ್ಯರಿಗೆ ಇಲ್ಲ. ರೈತರು ಮತ್ತು ಬಡವರ ಪರವಾದ ಈ ಹೋರಾಟ ತಾರ್ಕಿಕ ಅಂತ್ಯ ಕಾಣುವುದು ಖಚಿತ ಎಂದೂ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಎಚ್ಚರಿಸಿದರು.
ನನ್ನ ಜೀವಮಾನದಲ್ಲೇ ಇಷ್ಟೊಂದು ಸುಳ್ಳು ಹೇಳುವ ಮುಖ್ಯಮಂತ್ರಿಯನ್ನು ಕಂಡಿರಲಿಲ್ಲ. ನೈಸ್ ಮುಖ್ಯಸ್ಥ ಖೇಣಿ, ಯಡಿಯೂರಪ್ಪ ಮತ್ತು ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ ತ್ರಿಮೂರ್ತಿಗಳಿದ್ದಂತೆ. ದಿನಕ್ಕೊಂದು ತಂತ್ರ ಹೊಸೆಯುತ್ತಿದ್ದಾರೆ. ಅಧಿವೇಶನ ಆರಂಭಕ್ಕೂ ಮೊದಲು ವಿಧಾನ ಮಂಡಲದಲ್ಲಿ ಚರ್ಚೆಗೆ ಸಿದ್ಧ ಎಂದ ಮುಖ್ಯಮಂತ್ರಿ ಕಲಾಪದ ಹಾದಿ ತಪ್ಪಿಸಿ ಪಲಾಯನ ಮಾಡಿದರು. ಮೊನ್ನೆ ವಿಶೇಷ ಅಧಿವೇಶನ ಕರೆಯುತ್ತೇನೆ ಅಂದ್ರು, ಮರುದಿನ ಪ್ರತಿಪಕ್ಷ ಮುಖಂಡರ ಸಭೆ ಕರೆಯುತ್ತೇನೆ ಅಂದ್ರು, ಈಗ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಧರಂಸಿಂಗ್ ಅವರಿಗೆ ಪತ್ರ ಬರೀತಿನಿ ಅಂದಿದ್ದಾರೆ. ನಾಳೆ ಮತ್ತೊಂದು ಹೇಳ್ತಾರೆ. ಇಂಥ ಭಂಡಾಟದ ಹೇಳಿಕೆಗಳಿಂದ ನಾನು ವಿಚಲಿತನಾಗಲಾರೆ. ತಾಳ್ಮೆ ಕಳೆದುಕೊಳ್ಳಲಾರೆ' ಎಂದರು.
ತಾಕತ್ತಿದ್ದರೆ ಕೇಸ್ ಹಾಕ್ಲಿ:ಯೋಜನೆ ಕುರಿತ ಸತ್ಯಾಂಶಗಳನ್ನು ಜನರಿಗೆ ತಿಳಿಸುತ್ತಿರುವ ವಿಜಯ ಕರ್ನಾಟಕ ವಿರುದ್ಧ ಆ ಖೇಣಿ ಹತ್ತು ಸಾವಿರ ಕೋಟಿ ರೂ.ಗೆ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ನೊಟೀಸ್ ಕೊಟ್ಟಿದ್ದಾನೆ. ಅವನಿಗೆ ತಾಕತ್ತು ಇದ್ದರೆ ನನ್ನ ವಿರುದ್ಧ ಕೇಸು ಹಾಕಲಿ. ಒಬ್ಬ ಮಾಜಿ ಪ್ರಧಾನಿಯಾಗಿ ಕೋರ್ಟ್ ಮುಂದೆ ಹೋಗಿ ನಿಲ್ತೇನೆ. ನೈಸ್ ಹಗರಣದ ಎಲ್ಲ ವಿವರಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ.