ಟಿ20 ವಿಶ್ವಕಪ್ ತಂಡದಲ್ಲಿ ವಿನಯ್ ಕುಮಾರ್
ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ತಂಡದಲ್ಲಿ ಯುವ ಆಟಗಾರರಿಗೆ ಮತ್ತು ಆಲ್ ರೌಂಡರುಗಳಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ವೀರೇಂದ್ರ ಸೆಹ್ವಾಗ್ ಅವರು ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಗಾಯದ ಸಮಸ್ಯೆ ಎದುರಿಸುತ್ತಿರುವ ಆರಂಭಿಕ ಬ್ಯಾಟ್ಸ್ ಮನ್ ಗೌತಮ್ ಗಂಭೀರ್ ಮತ್ತು ಮಧ್ಯಮ ಕ್ರಮಾಂಕರ ದಾಂಡಿಗ ಯುವರಾಜ್ ಸಿಂಗ್ ಕೂಡ ಸ್ಥಾನ ಪಡೆದಿದ್ದಾರೆ.
ತಂಡ ಹೀಗಿದೆ : ಮಹೇಂದ್ರ ಸಿಂಗ್ ಧೋನಿ, ವೀರೇಂದ್ರ ಸೆಹ್ವಾಗ್, ಗೌತಮ ಗಂಭೀರ್, ಯುಸೂಫ್ ಪಠಾಣ್, ಹರಭಜನ್ ಸಿಂಗ್, ಯುವರಾಜ್ ಸಿಂಗ್, ಜಾಹೀರ್ ಖಾನ್, ಪಿಯೂಶ್ ಚಾವ್ಲಾ, ಸುರೇಶ್ ರೈನಾ, ರವೀಂದ್ರ ಜಡೇಜಾ, ಪ್ರವೀಣ್ ಕುಮಾರ್, ಆಶಿಶ್ ನೆಹ್ರಾ, ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್ ಮತ್ತು ವಿನಯ್ ಕುಮಾರ್.
ಕರ್ನಾಟಕದ ಉದಯೋನ್ಮುಖ ಆಟಗಾರರಾದ ಮನೀಶ್ ಪಾಂಡೆ ಮತ್ತು ಮಿಥುನ್ ಅಭಿಮನ್ಯು ಅವರು ಕೂಡ ಸಂಭಾವ್ಯ 30 ಆಟಗಾರರ ತಂಡದಲ್ಲಿದ್ದರು. ಆದರೆ, ಆಯ್ಕೆಗಾರರ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ವಿನಯ್ ಕುಮಾರ್ ಪ್ರಸಕ್ತ ಐಪಿಎಲ್ ಮೂರನೇ ಆವೃತ್ತಿಯಲ್ಲಿ ಅತ್ಯುತ್ತಮವಾಗಿ ಆಡುತ್ತಿದ್ದು, ಆಯ್ಕೆಯಿಂದ ಕರ್ನಾಟಕದ ಜನತೆಯಲ್ಲಿ ಸಂತಸ ಮೂಡಿಸಿದ್ದಾರೆ.
ವೆಸ್ಟ್ ಇಂಡೀಸಿನ ಬೌನ್ಸಿ ಪಿಚ್ ಗಳು ವೇಗಿಗಳಿಗೆ ಅನುಕೂಲಕರವಾಗಿವೆ. ವಿನಯ್ ಕುಮಾರ್ ಮಧ್ಯಮ ವೇಗಿಯಾಗಿದ್ದರೂ ಚಾಣಾಕ್ಷತನದಿಂದ ಬೌಲಿಂಗ್ ಮಾಡುತ್ತಿರುವುದರಿಂದ ಸಹಜವಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.