ಮೈಸೂರು : ಇನ್ಫೋಸಿಸ್ ಕಾವಲಿಗೆ ಸಿಐಎಸ್ಎಫ್
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗೃಹ ಸಚಿವ ವಿ ಎಸ್ ಆಚಾರ್ಯ, ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿ ಎನಿಸಿರುವ ಇನ್ಫೋಸಿಸ್ ಕಂಪನಿಯ ಕೇಂದ್ರ ಕಚೇರಿಗೆ ಈಗಾಗಲೇ ಸಿಐಎಸ್ಎಫ್ ಭದ್ರತೆಯನ್ನು ನಿಯೋಜಿಸಲಾಗಿದೆ. ಮನವಿ ಮೇರೆಗೆ ಇದೀಗ ಮೈಸೂರಿನ ಶಾಖೆಗೂ ಸಿಐಎಸ್ಎಫ್ ಪಡೆಯನ್ನು ನಿಯೋಜಿಸಲಾಗಿದೆ. ಕಂಪನಿ ಹಾಗೂ ಉದ್ಯೋಗಿಗಳ ಸುರಕ್ಷಿತೆಯಿಂದ ಇಂತಹ ನಿರ್ಧಾರಗಳು ಅಗತ್ಯ ಎಂದು ಆಚಾರ್ಯ ಅಭಿಪ್ರಾಯಪಟ್ಟರು.
ಈಗಾಗಲೇ ಸಿಐಎಸ್ಎಫ್ ಪಡೆ ಬೆಂಗಳೂರಿನಲ್ಲಿರುವ ಕೇಂದ್ರ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಂಪನಿಯ ಆಡಳಿತ ಮಂಡಳಿ ಮತ್ತು ಉದ್ಯೋಗಿಗಳು ಸಿಬ್ಬಂದಿಯೊಂದಿಗೆ ಸ್ನೇಹ ಸೌಹಾರ್ದದಿಂದ ನಡೆದುಕೊಳ್ಳುತ್ತಿದ್ದು, ಮೈಸೂರಿನಲ್ಲಿ ಇನ್ಫೋಸಿಸ್ ಶಾಖಾ ಕಂಪನಿಗೆ ಭದ್ರತೆ ಒದಗಿಸುತ್ತಿರುವುದು ಖುಷಿ ಸಂಗತಿಯಾಗಿದೆ ಎಂದು ಸಿಐಎಸ್ಎಫ್ ಮುಖ್ಯಸ್ಥ ಆರ್ ಕೆ ಮಿಶ್ರಾ ಅಭಿಪ್ರಾಯಪಟ್ಟರು.
ಸಿಐಎಸ್ಎಫ್ ಕಾರ್ಯವೈಖರಿ ಶ್ಲಾಘನೀಯ ಎಂದು ಬಣ್ಣಿಸಿದ ಇನ್ಪೋಸಿಸ್ ಮುಖ್ಯಸ್ಥ ಎನ್ ಆರ್ ನಾರಾಯಣಮೂರ್ತಿ, ಬೆಂಗಳೂರು ಮತ್ತು ಮೈಸೂರಿನಲ್ಲಿ ಕಂಪನಿಗಳಿಗೆ ಸಿಐಎಸ್ಎಫ್ ಭದ್ರತೆ ಒದಗಿಸುತ್ತಿರುವುದರಿಂದ ಕಂಪನಿ ಆಡಳಿತ ಮಂಡಳಿಗೆ ಅತ್ಮವಿಶ್ವಾಸ ಹೆಚ್ಚಿದೆ ಎಂದರು. ಕಳೆದ ಸೆಪ್ಟೆಂಬರ್ ನಲ್ಲಿ ಬೆಂಗಳೂರಿನಲ್ಲಿರುವ ಇನ್ಫೋಸಿಸ್ ಕೇಂದ್ರ ಕಂಪನಿಗೆ ಸಿಐಎಸ್ಎಫ್ ಸೇವೆಯನ್ನು ಒದಗಿಸಲಾಗಿತ್ತು.
ಮೈಸೂರಿನಲ್ಲಿರುವ ಇನ್ಫೋಸಿಸ್ ಸುಮಾರು 300 ವಿಶಾಲ ಪ್ರದೇಶದ ಹೊಂದಿದ್ದು, ಕಂಪನಿಗೆ ಹೊಸದಾಗಿ ಆಯ್ಕೆಯಾಗಿರುವ ಉದ್ಯೋಗಗಳ ತರಬೇತಿ ನೀಡುವ ಸಲುವಾಗಿ ಜಾಗತಿಕ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಕಳೆದ ನವೆಂಬರ್ ನಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಈ ಕೇಂದ್ರವನ್ನು ಉದ್ಘಾಟಿಸಿದ್ದರು. ಭಯೋತ್ಪಾದಕರಿಂದ ಪದೇಪದೆ ಎಚ್ಚರಿಕೆ ಕರ ಗಂಟೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇನ್ಫೋಸಿಸ್ ಸಿಐಎಸ್ಎಫ್ ಪಡೆ ನಿಯೋಜಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಂಡಿತ್ತು.