ಬಿಬಿಎಂಪಿ ಅಂಗಳಕ್ಕೆ ರೇಡಿಯೋ ಒನ್ ಆರ್ ಜೆ
ಚುನಾವಣಾ ಕಣಕ್ಕೆ ಇಳಿಯುತ್ತಿರುವ ಮೊದಲ ಆರ್ ಜೆ ರಾಕೇಶ್(27) . ಅಲ್ತಾಫ್ ಸುಲ್ತಾನ್ ಎಂದೇ ಖ್ಯಾತರಾಗಿರುವ ರಾಕೇಶ್ ರೇಡಿಯೋ ಒನ್ ನ ಪ್ರಮುಖ ರೇಡಿಯೋ ಜಾಕಿ. ಜೋಗುಪಾಳ್ಯ ವಾರ್ಡ್ ನ ಪಕ್ಷೇತರ ಸ್ಪರ್ಧಿಈ ಬಾರಿ ಬಿಬಿಎಂಪಿ ಚುನಾವಣೆಗೆ ನಿಂತಿದ್ದಾರೆ. ಮಾ.12 ರಂದು ನಾಮಪತ್ರ ಸಲ್ಲಿಸಿ, ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.
ಯುವಕರೇ ಮೇಲೇಳಿ
ಡಾಕ್ಟರ್ ಗಳು, ಟೆಕ್ಕಿಗಳು, ನಟ, ನಟಿ, ನಿರ್ದೇಶಕರುಗಳು, ಗೃಹಿಣಿಯರು, ತರಕಾರಿ ಮಾರುವವರು, ರೌಡಿಗಳು, ರೌಡಿಗಳು ಪತ್ನಿಗಳು, ಕ್ರಿಕೆಟರ್ ಹೆಂಡತಿ, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪ್ರತಿನಿಧಿಗಳು ಹೀಗೆ ಎಲ್ಲರೂ ತಮ್ಮ ವಾರ್ಡ್ ಗಳ ಅಭಿವೃದ್ದ್ಧಿಗಾಗಿ ಪಣತೊಟ್ಟು ನಿಂತವರೇ ಆಗಿದ್ದಾರೆ.
ಆದರೆ ಸೊಗಸಾದ ಮಾತುಗಾರ ರಾಕೇಶ್ ಹೇಳುವುದನ್ನು ನೋಡಿ..'ಭಾರತದ ಜನಸಂಖ್ಯೆಯ ಶೇ.60 ರಷ್ಟು ಜನ 29 ವಯೋಮಾನ ಅಥವಾ ಅದಕ್ಕಿಂತ ಕೆಳಗಿನ ವಯಸ್ಸಿನ ಯುವಕರು. ಆದರೂ ಶೇ.40 ರಷ್ಟಿರುವ ಇತರರ ಮೇಲೆ ಈ ಯುವಕರು ಅವಲಂಬಿತರಾಗಿರುವುದು ಸರಿಯಲ್ಲ. ಯುವಶಕ್ತಿಯ ಪ್ರದರ್ಶನ ಮಾಡಲು ರಾಜಕೀಯಕ್ಕಿಂತ ದೊಡ್ಡ ವೇದಿಕೆ ಇನ್ನೊಂದಿಲ್ಲ. ಸ್ವಾವಲಂಬನೆಯ ಹಾದಿಗೆ ಇದು ಪೂರಕ . ಪ್ರತಿಯೊಬ್ಬರಿಗೂ ಮತದಾನದ ಮಹತ್ವದ ಅರಿವು ಮೂಡಬೇಕು ಎಂದಿದ್ದಾರೆ.
ಹೊಸಬರಿಗೆ ಅವಕಾಶ ನೀಡಿ, ಭ್ರಷ್ಟ್ರರನ್ನು ರಾಜಕೀಯದಿಂದ ಹೊರಗಟ್ಟಿ ಎನ್ನುವ ರಾಕೇಶ್ ಗೆ ಆತನ ಸಹೋದ್ಯೋಗಿಗಳು ಅಪಾರ ಬೆಂಬಲ ನೀಡುತ್ತಿದ್ದಾರೆ. ವ್ಯವಸ್ಥೆಯನ್ನು ದೂರುವ ಬದಲು, ನಾವೇ ವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು ಉತ್ತಮವಲ್ಲವೇ ಎಂದು ಪ್ರಶ್ನಿಸುವ ರಾಕೇಶ್ ಅವರನ್ನು ಅವರ ವಾರ್ಡ್ ನ ಜನ ಇನ್ನೂ ಪೂರ್ಣವಾಗಿ ಒಪ್ಪಿಕೊಂಡತ್ತಿಲ್ಲ. ಆದರೆ, ಚುನಾವಣಾ ಪೂರ್ವ ಅನುಭವಗಳು ಒಳ್ಳೆ ಪಾಠ ಕಲಿಸಿವೆ ಜನರೊಡನೆ ಬೆರೆತು ಕೆಲಸ ಮಾಡುವ ಹುಮ್ಮಸ್ಸು ಇಮ್ಮಡಿಯಾಗಿದೆ ಎನ್ನುತ್ತಾರೆ ಆಶಾವಾದಿ ಆರ್ ಜೆ ರಾಕೇಶ್.