ಗರ್ಭಿಣಿಯರಿಗೆ ಸರಕಾರದ ವತಿಯಿಂದ ಆರತಿ
ಉಡುಪಿ ಜಿಲ್ಲಾ ಕುಟುಂಬ ಮತ್ತು ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಮಿಷನ್ ಜಿಲ್ಲಾ ಘಟಕ, ಮಂದರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸ್ಥಳೀಯ ಯುವಕ ಮಂಡಳಗಳ ಸಹಯೋಗದೊಂದಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ಕಳೆದ ಶನಿವಾರ ಏರ್ಪಡಿಸಿ, ಯಶಸ್ವಿಗೊಳಿಸಲಾಯಿತು.
ಸಾಮೂಹಿಕ ಸೀಮಂತ ಕಾರ್ಯಕ್ರಮದಿಂದ ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿರುವ ಮೂಢನಂಬಿಕೆಗಳೂ ಹೋಗಲಾಡಿಸಲು ಸಹಕಾರಿಯಾಗಲಿದೆ. ಮಗುವಿನ ಪಾಲನೆ ಪಾಲನೆ ಪೋಷಣೆ ಬಗೆಗೆ ಭಾವಿ ತಾಯಿಯರಿಗೆ ತಿಳವಳಿಕೆ ನೀಡುವುದು ಇಂಥ ಕಾರ್ಯಕ್ರಮಗಳಿಂದ ಸಾಧ್ಯವಾಗುತ್ತದೆ. ಜತೆಗೆ, ಸೀಮಂತ ಮಾಡುವುದಕ್ಕೆ ಆರ್ಥಿಕವಾಗಿ ಹಿಂದುಳಿದ ಮನೆಯವರಿಗೆ ಸಾಮೂಹಿಕ ಕಾರ್ಯಕ್ರಮ ಆಸರೆಯಾಗುತ್ತದೆ.
ಗ್ರಾಮೀಣ ಪ್ರದೇಶದಲ್ಲಿ ಗರ್ಭಿಣಿ ಮಹಿಳೆಯರಲ್ಲಿರುವ ಹೆರಿಗೆ ಕುರಿತಾದ ಅನೇಕ ಭಯಗಳನ್ನು ದೂರು ಮಾಡುವುದು ಒಂದು ಉದ್ದೇಶ. ಇದರೊಂದಿಗೆ ಸರಕಾರಿ ಆಸ್ಪತ್ರೆ ಸೇವೆಯನ್ನು ಪ್ರತಿಯೊಬ್ಬರು ಪಡೆದುಕೊಳ್ಳುವಂತೆ ಪ್ರೇರೇಪಿಯುವುದು ಮುಖ್ಯ. ಗ್ರಾಮೀಣ ಪ್ರದೇಶದಲ್ಲಿರುವ ಮೂಢನಂಬಿಕೆಗಳಿಂದಾಗಿ ಗರ್ಭಿಣಿ ಮಹಿಳೆಯರು ಸಾಕಷ್ಟು ತೊಂದರೆಗೆ ಸಿಲುಕಿರುವ ಘಟನೆಗಳು ಜರುಗಿವೆ.
ಹೀಗಾಗಿ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳುವ ಜನರಲ್ಲಿ ಅರಿವುಂಟು ಮಾಡಲು ಈ ಕಾರ್ಯಕ್ರಮ ಸರಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಸೀಮಂತ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಕಡೂರು, ಶಿರೂರು, ಹೆಗ್ಗುಜ್ಜೆ, ಆವರ್ಸೆ, ನಡೂರು, ಹಲಿಯಾನ್, ವಂದಾರು ಮತ್ತು ಕುಕ್ಕಾಜೆ ಪ್ರದೇಶದಿಂದ ಗರ್ಭಿಣಿ ಮಹಿಳೆಯರು ಪಾಲ್ಗೊಂಡಿದ್ದರು.