ಹೊಗೇನಕಲ್ ವಿವಾದಕ್ಕೆ ತಮಿಳ್ನಾಡು ಬಜೆಟ್ಟಲ್ಲಿ ಕಿಡಿ
ಧರ್ಮಗಿರಿ, ಕೃಷ್ಣಗಿರಿ ಜಿಲ್ಲೆಯ ಸುಮಾರು 30 ಲಕ್ಷ ಜನರಿಗೆ ಕುಡಿಯುವ ನೀರು ಒದಗಿಸಲು ಹೊಗೇನಕಲ್ ನೀರಾವರಿ ಯೋಜನೆಯನ್ನು 2008ರಲ್ಲಿ ತಮಿಳುನಾಡು ಸರ್ಕಾರ ಕೈಗೆತ್ತಿಕೊಂಡಿತ್ತು. ಕಾವೇರಿ ಪ್ರಾಧಿಕಾರದ ನಿಯಮಗಳನ್ನು ಉಲ್ಲಂಘಿಸಿ , ಯೋಜನೆ ಕಾರ್ಯಗತ ಮಾಡುವಂತಿಲ್ಲ ಎಂದು ಕರ್ನಾಟಕ ಸರ್ಕಾರ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವುದನ್ನು ತಳ್ಳಿಹಾಕಿದ ತಮಿಳುನಾಡು ಸಿಎಂ ಕರುಣಾನಿಧಿ ಅವರು, ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಕಾವೇರಿ ನೀರಿನ ಯೋಜನೆ ಇದ್ದಂತೆ ಇದು ಕೂಡ, ಇನ್ನೆರಡು ವರ್ಷಗಳಲ್ಲಿ ಹೊಗೇನಕಲ್ ಯೋಜನೆ ಪೂರ್ಣಗೊಳ್ಳಲಿದೆ ಎಂದರು.
ಹೊಗೇನಕಲ್ ಯೋಜನೆಗೆ ತಮಿಳುನಾಡು ಸರಕಾರ ಬಜೆಟ್ಟಿನಲ್ಲಿ ಅನುದಾನ ನೀಡಿರುವ ವಿಷಯದ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ, 'ಎರಡು ರಾಜ್ಯಗಳು ಉತ್ತಮ ಸಂಬಂಧ ಹೊಂದಿವೆ. ಸಮಸ್ಯೆ ಕಂಡು ಬಂದರೆ ಮಾತುಕತೆ ಮೂಲಕ ಇತ್ಯರ್ಥ ಮಾಡಿಕೊಳ್ಳಲಾಗುವುದು ' ಎಂದಿದ್ದಾರೆ.
ಯಡಿಯೂರಪ್ಪ ಮತ್ತೇ ಅದೇ ರಾಗ, ಅದೇ ಹಾಡು ಹಾಡುತ್ತಿದ್ದಾರೆ. ಕರುಣಾನಿಧಿ ಜತೆಗೂಡಿ ಗುಪ್ತ ಒಪ್ಪಂದ ಮಾಡಿಕೊಂಡಿರುವ ಸಾಧ್ಯತೆಗಳಿವೆ ಯಾವುದಕ್ಕೂ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವುದು ಒಳ್ಳೆಯದು. ತಮಿಳುನಾಡು ಸರ್ಕಾರದ ಏಕಪಕ್ಷೀಯ ನಿರ್ಧಾರ ಸರಿಯಲ್ಲ ಎಂದು ಸಿದ್ದರಾಮಯ್ಯ , ಎಚ್ ಡಿ ರೇವಣ್ಣ ಸೇರಿದಂತೆ ಪ್ರತಿಪಕ್ಷದ ಅನೇಕ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ತಮಿಳುನಾಡು ರಾಜ್ಯದ ಬಜೆಟ್ ನಲ್ಲಿ ಹೊಗೇನಕಲ್ ನೀರಾವರಿ ಯೋಜನೆಗೆ ಸುಮಾರು 400 ಕೋಟಿ ರು. ಅನುದಾನ ನೀಡಿರುವುದಕ್ಕೂ ಮುಂಚಿತವಾಗಿ ಕೇಂದ್ರದ ಅನುಮೋದನೆಯನ್ನು ಕಳೆದ ವರ್ಷವೇ ತಮಿಳರು ಪಡೆದಿದ್ದಾರೆ. ಜಪಾನ್ ನಿಂದ 1334 ಕೋಟಿ ರು. ನೆರವು ಪಡೆಯಲು ತಮಿಳುನಾಡು ಸರ್ಕಾರಕ್ಕೆ ಕೇಂದ್ರ ಸರ್ಕಾರ 2009-10ನೇ ಸಾಲಿನ ಬಜೆಟ್ ನಲ್ಲಿ ಮಂಜೂರಾತಿ ನೀಡಿತ್ತು.