ಪೇಚಿಗೆ ಸಿಲುಕಿದ ಮರಾಠಿವಾದಿ ರಾಜ್ ಠಾಕ್ರೆ
ಮುಂಬೈ ಎನ್ನುವ ಬದಲು ಬಾಂಬೆ ಎಂದು ಹೇಳಿ ಹಲವು ಬಾರಿ ಕ್ಷಮೆಯಾಚಿಸಿದ್ದ ರಾಜ್ ಠಾಕ್ರೆ, ಇತ್ತೀಚೆಗೆ ಛತ್ರಪತಿ ಶಿವಾಜಿ ಟರ್ಮಿನಸ್(CST) ಎನ್ನುವ ಬದಲು ವಿಕ್ಟೋರಿಯಾ ಟರ್ಮಿನಸ್ (VT) ಎಂದು ತಮ್ಮ ಭಾಷಣದಲ್ಲಿ ಪದೇ ಪದೇ ಹೇಳಿ ಪೇಚಿಗೆ ಸಿಲುಕಿದ್ದಾರೆ.ರಾಜ್ ಠಾಕ್ರೆ ಅವರ ಈ ಭಾಷಣವನ್ನು ಆಲಿಸಿರುವ ಮಾಜಿ ಸಚಿವ ನವಾಬ್ ಮಲ್ಲಿಕ್ ,'ಶಿವಾಜಿ ಟರ್ಮಿನಸ್ ಮರೆತಿರುವ ರಾಜ್ ಇತರರಿಗೆ ಬುದ್ಧಿವಾದ ಹೇಳುವ ಅರ್ಹತೆ ಕಳೆದುಕೊಂಡಿದ್ದಾರೆ ಎಂದಿದ್ದಾರೆ.
ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ತಮ್ಮಕಾಲೇಜು ದಿನಗಳನ್ನು ನೆನಪಿಸಿಕೊಂಡ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ ಎಸ್ ) ಮುಖಂಡ ಠಾಕ್ರೆ, ಶಿವಾಜಿ ಟರ್ಮಿನಸ್ ನಲ್ಲಿ ತಮ್ಮ ನೆಚ್ಚಿನ ತಾಣ ಎನ್ನುವ ಬದಲು ವಿಕ್ಟೋರಿಯಾ ಟರ್ಮಿನಸ್ ಎಂದಿದ್ದಾರೆ. ತಾಂತ್ರಿಕವಾಗಿ ಠಾಕ್ರೆ ಮಾತನ್ನು ಒಪ್ಪಬಹುದಾದರೂ, 1996 ರಲ್ಲೇ ವಿಕ್ಟೋರಿಯಾ ಟರ್ಮಿನಸ್ ಅನ್ನು ಛತ್ರಪತಿ ಶಿವಾಜಿ ಟರ್ಮಿನಸ್ ಎಂದು ಮರು ನಾಮಕರಣ ಮಾಡಲಾಗಿದೆ. ಅಲ್ಲದೆ ಮರಾಠಿವಾದಿ ಠಾಕ್ರೆ ಬಾಯಲ್ಲಿ ಯಾಕೆ ಈ ರೀತಿ ವಿಕ್ಟೋರಿಯಾ ಹೆಸರು ಉಚ್ಚಾರಯಾಯ್ತು ಎಂದು ಅವರ ಅಭಿಮಾನಿಗಳು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.