ಮಾಯಾವತಿ ಇದು ನ್ಯಾಯಾನಾ?
ಏಪ್ರಿಲ್ 14 , 2009 ಕ್ಕೆ ಬಹುಜನ ಸಮಾಜವಾದಿ ಪಕ್ಷಕ್ಕೆ 25 ವರ್ಷ ತುಂಬಿದ ಹಿನ್ನಲೆಯಲ್ಲಿ ಪಕ್ಷ ಇಂದು (ಮಾರ್ಚ್ 15, 2010 ) ಬೃಹತ್ ರ್ಯಾಲಿ ಆಯೋಜಿಸಿದೆ. ಇದರಲ್ಲಿ ಸುಮಾರು 25ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಸಮಾವೇಶಕ್ಕೆ ಸರಕಾರ ಸುಮಾರು 200ಕೋಟಿ ಖರ್ಚು ಮಾಡುತ್ತಿದೆ. ಕಳೆದ ವರ್ಷವೇ ಈ ಸಮಾವೇಶ ಆಯೋಜಿಸಲಾಗಿತ್ತು,
ಆದರೆ ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಬೆಳ್ಳಿಹಬ್ಬ ಆಚರಣೆಯನ್ನು ನಡೆಸುತ್ತಿದ್ದೇವೆ ಎಂದು ಬಿಎಸ್ಪಿ ನಾಯಕರುಗಳ ನುಡಿಮುತ್ತು. ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿರುವ ಪಕ್ಷದ ಕಾರ್ಯಕರ್ತರಿಗೆ ಹವಾನಿಯಂತ್ರಿತ ಕೊಠಡಿ, ಭೂರಿ ಭೋಜನ, ಸುಸಜ್ಜಿತ ಪ್ರಥಮ ಚಿಕಿತ್ಸಾ ಘಟಕ ತಯಾರಾಗಿದೆ. ಸರಕಾರಿ ಅಧಿಕಾರಿಗಳು ಮೇಲ್ವಿಚಾರಣೆನಡೆಸುತ್ತಿದ್ದಾರೆ.
ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯವತಿಯ ದುಂದುವೆಚ್ಚ ನಡೆಸುತ್ತಿರುವುದು ಇದೇನು ಹೊಸದಲ್ಲ. ಪಕ್ಷದ ನಾಯಕರ ಮತ್ತು ಚಿಹ್ನೆಗಳ ಪ್ರತಿಮೆಯನ್ನು ಲಕ್ನೋ ನಗರದಾದ್ಯಂತ ಸ್ಥಾಪಿಸಲು ಮುಂದಾಗಿದ್ದಾಗ ಸುಪ್ರೀಂಕೋರ್ಟ್ ನಿಂದ ಚೀಮಾರಿಗೆ ಒಳಗಾಗಿದ್ದರು. ಮುಖ್ಯಮಂತ್ರಿಯ ಈ ದುಂದುವೆಚ್ಚದ ಕ್ರಮ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಮತ್ತು ಟೀಕೆಗೆ ಒಳಗಾಗಿದೆ.
ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷೆ ರೀಟಾ ಬಹುಗುಣ ಸಾರ್ವಜನಿಕರಿಂದ ಸಂಗ್ರಹವಾಗಿರುವ ತೆರಿಗೆ ಹಣವನ್ನು ಬೇಕಾಬಿಟ್ಟಿ ಪೋಲು ಮಾಡುತ್ತಿರುವುದಕ್ಕೆ ಮಾಯಾ ಸರಕಾರವನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ. 2002ರಲ್ಲಿ ಇದೇ ರೀತಿ ಬಹುಜನ ಸಮಾಜವಾದಿ ಪಕ್ಷದ ಸಮಾವೇಶದಲ್ಲಿ 16 ಜನ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದರು.