ವನ್ಯಜೀವಿ ಸಂರಕ್ಷಣೆ ಕುರಿತು ಅಧಿಕಾರಿಗಳ ಚರ್ಚೆ
ರಾಜ್ಯದಲ್ಲಿ ಅರಣ್ಯ ಅಪರಾಧ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ದಕ್ಷಿಣ ರಾಜ್ಯಗಳ ವಿವಿಧ ಸ್ತರದ ಅಧಿಕಾರಿಗಳ ಸಭೆಯ ಬಳಿಕ ಸಿ.ಐ.ಡಿ. ಪೊಲೀಸ್ ಮಹಾನಿರ್ದೇಶಕ ಡಾ ಡಿ.ವಿ. ಗುರುಪ್ರಸಾದ್ ಅವರು ಈ ವಿಷಯ ತಿಳಿಸಿದರು. ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ವನ್ಯಜೀವಿಗಳ ವಸ್ತುಗಳ ಮೌಲ್ಯವನ್ನು ಪ್ರಕಟಿಸುವುದರಿಂದ ಅಪರಾಧಕ್ಕೆ ಕುಮ್ಮಕ್ಕು ನೀಡಿದಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ರಾಜ್ಯ ಸಿ.ಐ.ಡಿ. ಅರಣ್ಯ ಘಟಕ, ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಅರಣ್ಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಸಿ.ಐ.ಡಿ. ಅಧಿಕಾರಿಗಳ ಸಭೆಯನ್ನು ಶುಕ್ರವಾರ ಕರೆಯಲಾಗಿತ್ತು. ಈ ಸಭೆಯಲ್ಲಿ ರೈಲ್ವೆ ಇಲಾಖೆ, ಸುಂಕ ಮತ್ತು ತೆರಿಗೆ ಇಲಾಖೆ, ಸಿ.ಐ.ಎಸ್.ಎಫ್. ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ವನ್ಯಜೀವಿ ವಸ್ತುಗಳ ಸಾಗಾಣಿಕೆ ಮಾರಾಟ ದಂಧೆ ಮತ್ತಿತರ ಅಪರಾಧಗಳ ಕುರಿತು ಚರ್ಚಿಸುವ ಮೂಲಕ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು.
ವನ್ಯಜೀವಿ ವಸ್ತುಗಳಿಗೆ ಸಂಬಂಧಿಸಿದ ಅಪರಾಧ ಪತ್ತೆ ಕಾರ್ಯ ಹಾಗೂ ತನಿಖೆಗೆ ಸಂಬಂಧಿಸಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳೊಂದಿಗೆ ಸಮನ್ವಯತೆ ಸಾಧಿಸುವ ಕುರಿತು ಚರ್ಚಿಸಲಾಯಿತು. ವಿವಿಧ ರಾಜ್ಯಗಳಲ್ಲಿ ದಾಖಲಿಸಲಾಗಿರುವ ಪ್ರಕರಣಗಳು ಹಾಗೂ ಅಪರಾಧಿಗಳ ಮಾಹಿತಿ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು. ವನ್ಯಜೀವಿಗಳಾದ ಆನೆ, ಹುಲಿ, ಚಿರತೆ, ಜಿಂಕೆ, ಎರಡು ತಲೆ ಹಾವು, ನಕ್ಷತ್ರ ಆಮೆ, ಗರಗಸ ಮೀನುಗಳು ಅಳಿವಿನ ಅಂಚಿನಲ್ಲಿದ್ದು ಅಪರಾಧ ಕೃತ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಈ ಕೃತ್ಯಗಳ ನಿಯಂತ್ರಣದ ಕುರಿತು ಪ್ರಮುಖವಾಗಿ ಚರ್ಚಿಸಲಾಯಿತು ಎಂದರು.
ವನ್ಯಜೀವಿಗಳ ಸಂರಕ್ಷಣೆ ಹಾಗೂ ಈ ಕುರಿತ ಅಪರಾಧಗಳನ್ನು ನಿಯಂತ್ರಿಸುವಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ಪಾತ್ರ ಪ್ರಮುಖವಾಗಿದೆ ಎಂದು ಡಾ ಡಿ.ವಿ.ಗುರುಪ್ರಸಾದ್ ಅವರು ತಿಳಿಸಿದರು. ಅರಣ್ಯ ಅಪರಾಧಗಳನ್ನು ನಿಯಂತ್ರಿಸಲು ಇಲಾಖೆ ಮತ್ತಷ್ಟು ಸದೃಢವಾಗಬೇಕಾಗಿದೆ. ಈ ಸಂಬಂಧ ಇಲಾಖೆಗೆ ಹೆಚ್ಚಿನ ಸಿಬ್ಬಂದಿ ನೇಮಕ ಕೂಡ ಆಗಬೇಕು ಹಾಗೂ ಅಧಿಕಾರಿಗಳಿಗೆ ಅರಣ್ಯ ಸಂಪತ್ತು ರಕ್ಷಿಸುವ ಬಗ್ಗೆ ವಿಶೇಷ ತರಬೇತಿ ನೀಡುವ ಅವಶ್ಯಕತೆ ಇದೆ ಎಂದರು.
ಅರಣ್ಯ ಅಧಿಕಾರಿಗಳಿಗೇ ಅಲ್ಲದೆ, ಪೊಲೀಸರಿಗೂ ಕೂಡ ವನ್ಯಜೀವಿ ಸಂರಕ್ಷಣೆ ಹಾಗೂ ಅರಣ್ಯ ಸಂಪತ್ತು ರಕ್ಷಿಸುವ ಕುರಿತು ವಿಶೇಷ ತರಬೇತಿ ನೀಡುವ ಚಿಂತನೆ ನಡೆಯಿತು ಹಾಗೂ ಇಂತಹ ಸಭೆಗಳು ನಿರಂತರವಾಗಿ ನಡೆಯುವ ಮೂಲಕ ವನ್ಯಜೀವಿಗಳನ್ನು ಸಂರಕ್ಷಿಸಲು ಹಾಗೂ ಅರಣ್ಯ ಅಪರಾಧ ತಡೆಗಟ್ಟಲು ಅಂತರ್ ರಾಜ್ಯಗಳ ಪರಸ್ಪರ ಸಹಕಾರ ಅಗತ್ಯವಾಗಿದೆ ಎಂದು ಸಹ ತಿಳಿಸಿದರು. ಅರಣ್ಯ ಅಪರಾಧಗಳಿಗೆ ಸಂಬಂಧಿಸಿದಂತೆ ಆಗುತ್ತಿರುವ ಶಿಕ್ಷೆ ಪ್ರಮಾಣ ಕಡಿಮೆ ಎಂಬ ಅಂಶ ಚರ್ಚಿಸಲಾಗಿದ್ದು ಇಂತಹ ಅಪರಾಧಗಳನ್ನು ಪತ್ತೆ ಹಚ್ಚುವಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವ ಕುರಿತು ಸಹ ಚರ್ಚಿಸಲಾಯಿತು ಎಂದರು.