ಸಾಲುಮರದ ನೆರಳಿನಲ್ಲೇ ಇರಬಯಸುವ ತಿಮ್ಮಕ್ಕ
ಮಾಗಡಿ, ಮಾ.12 : ಪತಿ ಬಿಕ್ಕಲುಚಿಕ್ಕಯ್ಯನೊಂದಿಗೆ ಸೇರಿ ಮಾಗಡಿ ತಾಲ್ಲೂಕ್ ಹುಲಿಕಲ್ ರಸ್ತೆಯ ಎರಡು ಬದಿಗಳಲ್ಲಿ ಸಾಲು ಮರಗಳನ್ನು ನೆಟ್ಟು ಪೋಷಿಸಿ ಹೆಮ್ಮರವಾಗಿಸಿರುವ ವೃಕ್ಷಮಿತ್ರ, ನಾಡೋಜ ಸಾಲುಮರದ ತಿಮ್ಮಕ್ಕ ಬದುಕಿನ ಮುಸ್ಸಂಜೆಯ ದಿನಗಳನ್ನ ಏಕಾಂಗಿಯಾಗಿ ಕಾಲಕಳೆಯುತ್ತಿದ್ದಾರೆ.
ಮಕ್ಕಳಿಲ್ಲದ ಸಾಲುಮರದ ತಿಮ್ಮಕ್ಕನಿಗೆ ಬದುಕಿಗೆ ಆಶ್ರಯವಾಗಲು ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಾಲುಮರದ ತಿಮ್ಮಕ್ಕನಿಗೆ ಹಲವಾರು ಸೌಲಭ್ಯಗಳನ್ನ ನೀಡಿವೆ. ಪರಿಸರ ಪ್ರೇಮಿ ತಿಮ್ಮಕ್ಕನ ಮತ್ತಷ್ಟು ಆಶಯಗಳನ್ನು ಪೂರೈಸಲು ರಾಮನಗರ ಜಿಲ್ಲಾಡಳಿತ ಮುಂದಾಗಿದ್ದು ತಿಮ್ಮಕ್ಕನ ಮನೆಗೆ ಭೇಟಿ ನೀಡಿ ತಿಮ್ಮಕ್ಕನ ಆಶಯಗಳಿಗೆ ಸ್ಪಂದಿಸುವ ಭರವಸೆಯನ್ನು ನೀಡಿದೆ.
ಮಾಗಡಿ ತಾಲ್ಲೂಕಿನ ಕುದೂರು ಹೋಬಳಿಯ ಹುಲಿಕಲ್ಲು ಗ್ರಾಮದಲ್ಲಿರುವ ಸಾಲುಮರದ ತಿಮ್ಮಕ್ಕ ಪರಿಸರ ಪ್ರೇಮಿಯಾಗಿ ಹಲವಾರು ಪ್ರಮುಖ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ. 80 ವರ್ಷದ ಸಾಲುಮರದ ತಿಮ್ಮಕ್ಕ ಹುಲಿಕಲ್ ಗ್ರಾಮದಲ್ಲೇ ಏಕಾಂಗಿಯಾಗಿ ಬದುಕು ಸಾಗಿಸುತ್ತಿದ್ದಾರೆ. ಸಾಲು ಮರದ ತಿಮ್ಮಕ್ಕ ಸಂಕಷ್ಟದಲ್ಲಿದ್ದಾರೆಂಬ ಸುದ್ದಿ ಹಬ್ಬಿದ್ದರ ಹಿನ್ನೆಲೆಯಲ್ಲಿ ತಕ್ಷಣವೇ ಜಿಲ್ಲಾಡಳಿತದ ಉಪವಿಭಾಗಾಧಿಕಾರಿ ನಾಗರಾಜ್, ತಹಸೀಲ್ದಾರ್ ಎಂ.ವಿ.ನಾಗರಾಜ್ ಮತ್ತು ಸಿಬ್ಬಂದಿಗಳು ತಿಮ್ಮಕ್ಕನ ಮನೆಗೆ ಭೇಟಿ ಕುಶಲೋಪರಿ ವಿಚಾರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾಲುಮರದ ತಿಮ್ಮಕ್ಕ, ಸರ್ಕಾರಗಳು ಮತ್ತು ಹಲವಾರು ಸಂಘಸಂಸ್ಥೆಗಳು ಹಲವು ಸೌಲಭ್ಯಗಳನ್ನು ಕಲ್ಪಿಸಿ ಬದುಕಿಗೆ ಆಸರೆ ನೀಡಿದ್ದಾರೆ. ಸರ್ಕಾರ ಕೂಡ ವೃದ್ದಾಪ್ಯವೇತನ, ಅಂತ್ಯೋದಯ ಪಡಿತರ ಕಾರ್ಡನ್ನು ನೀಡಿದ್ದಾರೆ. ಆಶ್ರಯ ಯೋಜನೆಯಡಿಯಲ್ಲಿ ಸರ್ಕಾರ ಮನೆ ನಿರ್ಮಾಣಕ್ಕೆ ಸಹಾಯ ಮಾಡಿದೆ ಎಂದು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಹುಲಿಕಲ್ ಗ್ರಾಮದಲ್ಲಿ ತಿಮ್ಮಕ್ಕನ ಹೆಸರಿನಲ್ಲಿ ಒಂದು ಆಸ್ಪತ್ರೆ ನಿರ್ಮಿಸಬೇಕು ಮತ್ತು ಬದುಕಿನ ಬಂಡಿ ತಳ್ಳಲು ಪ್ರತಿ ತಿಂಗಳು 10 ಸಾವಿರ ರೂಪಾಯಿಗಳನ್ನು ಸರ್ಕಾರ ನೀಡಬೇಕೆಂದು ತಿಮ್ಮಕ್ಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸರ್ಕಾರ ಕೂಡ ಹಲವಾರು ಸೌಲಭ್ಯಗಳನ್ನ ತಿಮ್ಮಕ್ಕನಿಗೆ ನೀಡಿದ್ದು, ವೃದ್ದಾಪ್ಯ ವೇತನ, ಅಂತ್ಯೋದಯ ಪಡಿತರ ಚೀಟಿ, ರಾಜ್ಯದಲ್ಲೆಡೆ ಪ್ರಯಾಣ ಮಾಡಲು ಉಚಿತ ಬಸ್ಪಾಸ್ ನೀಡಲಾಗಿದೆ, ಆಶ್ರಯ ಯೋಜನೆಯಲ್ಲಿ ತಿಮ್ಮಕ್ಕನ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯವನ್ನು ನೀಡಿದೆ. ಸರ್ಕಾರದ ವತಿಯಿಂದ ನಾಲ್ಕು ಎಕರೆ ಜಮೀನು ಕೂಡ ತಿಮ್ಮಕ್ಕನಿಗೆ ಮಂಜೂರಾಗಿದ್ದು ಪರಭಾರೆಯಾಗಿದೆ ಎಂದು ಜಿಲ್ಲಾ ಉಪವಿಭಾಗಾಧಿಕಾರಿ ನಾಗರಾಜ್ ತಿಳಿಸಿದರು. ತಿಮ್ಮಕ್ಕನ ಆಶಯಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆಂದು ನಾಗರಾಜ್ ತಿಳಿಸಿದರು.
ಸಾಲುಮರದ ತಿಮ್ಮಕ್ಕ ಮೊದಲಿನಿಂದಲೂ ಹಳ್ಳಿಯಲ್ಲೇ ಇದ್ದುಕೊಂಡು ಸರಳ ಜೀವನ ನಡೆಸಿಕೊಂಡು ಬರುತ್ತಿದ್ದಾರೆ. ತಿಮ್ಮಕ್ಕನನ್ನು ಸನ್ಮಾನ ಸತ್ಕಾರಕ್ಕೆ ಆಹ್ವಾನಿಸುವ ಸಂಘಸಂಸ್ಥೆಗಳು ಕೂಡ ತಿಮ್ಮಕ್ಕನಿಗೆ ಆರ್ಥಿಕ ಸಹಾಯವನ್ನು ಮಾಡುತ್ತಿವೆ. ಒಂಟಿ ಜೀವನ ನಡೆಸುತ್ತಿರುವ ತಿಮ್ಮಕ್ಕನನ್ನು ನೋಡಿಕೊಳ್ಳಲು ಹಲವು ಸಂಘ ಸಂಸ್ಥೆಗಳು ಮಂದೆ ಬಂದಿವೆ. ಆದರೆ ತಿಮ್ಮಜ್ಜಿ ಮಾತ್ರ ತಾನು ಮತ್ತು ತನ್ನ ಪತಿ ಬೆಳೆಸಿರುವ ಸಾಲುಮರಗಳನ್ನ ನೋಡುತ್ತಾ ನೆರಳಿನಲ್ಲೇ ವಿಹರಿಸುತ್ತಾ ಹುಲಿಕಲ್ನಲ್ಲೇ ಇರುತ್ತೇನೆಂಬುದು ತಿಮ್ಮಕ್ಕ ಆಶಯವನ್ನ ವ್ಯಕ್ತಪಡಿಸಿದರು.