ನಂದಗಡ ಸಂಗೊಳ್ಳಿ ರಾಯಣ್ಣ ಶಾಲೆಗೆ ಪ್ರವೇಶ ಪರೀಕ್ಷೆ
ಬೆಳಗಾವಿ ವಿಭಾಗದ ಜಿಲ್ಲೆಗಳಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಪ್ರವೇಶ ಪರೀಕ್ಷೆ ಬರೆಯಲು ಅರ್ಹರಾಗಿದ್ದಾರೆ. ಈ ವಸತಿ ಶಾಲೆಯಲ್ಲಿ 50 ಸ್ಥಾನಗಳು ಲಭ್ಯವಿದ್ದು, ಶೇಕಡ 50ರಷ್ಟು ಬಾಲಕ ಹಾಗೂ ಶೇ.50ರಷ್ಟು ಬಲಕಿಯರಿಗೆ ಮೀಸಲಾಗಿವೆ. ಈ ಪೈಕಿ ಶೇಕಡ 50ರಷ್ಟು ಸ್ಥಾನಗಳು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಮೀಸಲಿದ್ದು, ಶೇ.25ರಷ್ಟು ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗದ ಮತ್ತು ಶೇ.25ರಷ್ಟು ಪ.ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಮೀಸಲಾಗಿವೆ.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಊಟ,ವಸತಿ ಹಾಗೂ ಶಿಕ್ಷಣ ನೀಡಲಾಗುವುದು. ಅರ್ಜಿ ನಮೂನೆಗೆ ಹಾಗೂ ಹೆಚ್ಚಿನ ಮಾಹಿತಿಯನ್ನು ಆಯಾ ತಾಲೂಕಿನ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ ಇಲ್ಲವೆ ನಂದಗಡದ ಸಂಗೊಳ್ಳಿ ರಾಯಣ್ಣ ವಸತಿ ಶಾಲೆಯಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಸಂಗೊಳ್ಳಿ ರಾಯಣ್ಣ ಸ್ಮಾರಕ ಸನಿವಾಸ ಶಾಲೆ, ನಂದಗಡ, ಖಾನಾಪೂರ ತಾಲುಕ್, ಬೆಳಗಾವಿ ಇಲ್ಲಿಗೆ ನೇರವಾಗಿ ಸಲ್ಲಿಸಬಹುದು.
* ನಂದಗಡ : ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನಲ್ಲಿರುವ ನಂದಗಡ ಗ್ರಾಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸುದ್ದಿಯಲ್ಲಿತ್ತು. ಬೆಳಗಾವಿಯಲ್ಲಿ ನಡೆದ ಐತಿಹಾಸಿಕ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ನಡೆದ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿ ನಂದಿಗ್ರಾಮವೆಂದು ಕೂಡ ಕರೆಯಲಾಗುತ್ತಿದ್ದ ಈ ಗ್ರಾಮಕ್ಕೆ ಭೇಟಿ ನೀಡಿದ್ದರು. ಶೇಂಗಾ ತಿಂದು ಆಡಿನ ಹಾಲು ಕುಡಿದು ದಾಹ ತೀರಿಸಿಕೊಂಡಿದ್ದರು. ಕಿತ್ತೂರು ಚೆನ್ನಮ್ಮನ ಬಂಟನಾಗಿದ್ದ, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನವನಾದ ಸಂಗೊಳ್ಳಿ ರಾಯಣ್ಣನನ್ನು ನಮ್ಮವರದೇ ಆದ ಪಿತೂರಿಯಿಂದ ಬಂಧಿಸಿದ್ದ ಬ್ರಿಟಿಷರು ನಂದಗಡ ಗ್ರಾಮದಲ್ಲಿ ಗಲ್ಲಿಗೇರಿಸಿದ್ದರು. ಈ ಸ್ಥಳ ಇತ್ತೀಚಿನವರೆಗೂ ಅನಾಥವಾಗಿ ಬಿದ್ದಿತ್ತು. ಈಗ, ಸಂಗೊಳ್ಳಿ ರಾಯಣ್ಣನ ನೆನಪಿಗಾಗಿ ವಸತಿ ಶಾಲೆಯನ್ನು ಪ್ರಾರಂಭಿಸಲಾಗಿದೆ.