ಸರಕಾರಕ್ಕೇ ನಾಮ ಹಾಕಿದ ಗೋಲ್ ಮಾಲ್ ನಿತ್ಯಾನಂದ
ರಾಮನಗರ, ಮಾ. 11 : 'ನಿತ್ಯಾ'ನಂದ ಲವ್ಸ್ ರಂಜಿತಾ ಸ್ಟೋರಿ ದಿನೇ ದಿನೇ ಒಂದೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿರುವಾಗಲೇ ಕಾವಿ ಕಾಮಿ ನಿತ್ಯಾನಂದನ ಒಂದೊಂದೇ ಹಗರಣಗಳು ಬಯಲಾಗುತ್ತಿವೆ. ಬರುವಾಗ ಬರಿಗೈಯಲ್ಲಿ ಬಿಡದಿಗೆ ಬಂದ ಭಕ್ತರ ನೆಚ್ಚಿನ 'ಸ್ವಾಮೀಜಿ' ಧರ್ಮ ಆದ್ಯಾತ್ಮದ ಹೆಸರಿನಲ್ಲಿ ಭಕ್ತರನ್ನು ಬಕ್ರ ಮಾಡಿ ಸುಮಾರು 21 ಎಕರೆ ಭೂಮಿಯನ್ನು ದಾನವಾಗಿ ಪಡೆದು ಆಶ್ರಮ ನಿರ್ಮಾಣ ಮಾಡಿರುವುದು ಸರ್ಕಾರಿ ದಾಖಲೆಯಿಂದಲೇ ಬಯಲಾಗಿದೆ.
ಬಿಡದಿಯ ಬಳಿ ಭೂಮಿಯನ್ನು ದಾನದಿಂದ ಪಡೆದು ನಿತ್ಯಾನಂದ ಪೀಠವೆಂದು ನಾಮಕರಣ ಮಾಡಿ ಕಾವಿ ತೊಟ್ಟು ದೇಶವಿದೇಶದಲ್ಲೆಲ್ಲಾ ಸಾವಿರ ಕೋಟಿಗೂ ಹೆಚ್ಚು ಹಣ ಆಸ್ತಿ ಸಂಪಾದನೆ ಮಾಡಿದ್ದು ಹೇಗೆ ಎಂಬುದು ಮಾತ್ರ ನಿಗೂಢವಾಗಿ ಉಳಿದಿದೆ. ದೇಶ ವಿದೇಶದಲ್ಲಿರುವ ಜಮೀನೆಲ್ಲಾ ನಿತ್ಯಾನಂದನ ಹೆಸರಿನಲ್ಲೇ ರಿಜಿಸ್ಟರ್ ಆಗಿರುವುದು ಮತ್ತಷ್ಟು ಅನುಮಾನಕ್ಕೆಡೆಮಾಡಿಕೊಟ್ಟಿದೆ.
ಜೀವನ್ರಾವ್, ಪ್ರತಾಪ್, ವಿನಾಯಕ್ ಎನ್ನುವವರು 2003-04ರಲ್ಲೇ ಸರ್ವೇನಂಬರ್ 21/1ರಲ್ಲಿ ಈ ಬರುಡೆದಾಸ ನಿತ್ಯಾನಂದನಿಗೆ ಸುಮಾರು 22 ಎಕರೆ ಜಮೀನನ್ನು ದಾನವಾಗಿ ನೀಡಿದ್ದಾರೆ. ಬಿಡದಿಯ ಈ ವಿಶಾಲವಾದ ಪ್ರದೇಶವನ್ನು ಪ್ರಮುಖ ಆಸ್ಥಾನವನ್ನಾಗಿಸಿಕೊಂಡ ನಂತರ ಸುಮಾರು 13 ದೇಶಗಳಲ್ಲಿ ಬ್ರಾಂಚ್ ತೆರೆದು ಖಾಲಿಯಿದ್ದ ಜೋಳಿಗೆಯನ್ನು ಭರ್ಜರಿಯಾಗಿಯೇ ತುಂಬಿಸಿಕೊಂಡಿದ್ದಾನೆ. ಲಂಪಟ ನಿತ್ಯಾನಂದನಿಗೆ ದಾನವಾಗಿ ಜಮೀನು ನೀಡಿರುವ ಬಗ್ಗೆ ರಾಮನಗರ ಕಂದಾಯ ಇಲಾಖೆಯಲ್ಲಿ ದಾಖಲೆಗಳಿವೆ.
ಜತೆಗೆ ಬಿಡದಿಯ 23 ಎಕರೆ ಜಮೀನಿನಲ್ಲಿ ಕೇವಲ ಒಂದು ಎಕರೆ ಭೂಮಿಯನ್ನು ಭೂಪರಿವರ್ತನೆ ಮಾಡಿಸಿದ್ದು, ಮಿಕ್ಕ 22 ಎಕರೆ ಜಮೀನು ಯಾವುದೇ ರೀತಿಯಲ್ಲೂ ಭೂಪರಿವರ್ತನೆಯಾಗದೇ ಕೃಷಿಯೇತರ ಚಟುವಟಿಕೆಗೆ ಬಳಸುತ್ತಿರುವುದರಿಂದ ರಾಮನಗರ ತಹಸೀಲ್ಧಾರ್ ನಟೇಶ್ ನೋಟೀಸ್ ನೀಡಿ ನಿತ್ಯಾನಂದನಿಗೆ ಮತ್ತೊಂದು ಚಾಟಿ ಏಟು ನೀಡಿದ್ದಾರೆ. ನೋಟೀಸಿಗೆ ತಕ್ಷಣವೇ ಉತ್ತರ ನೀಡಬೇಕು ಇಲ್ಲದಿದ್ದರೆ 1964ರ ಕಲಂ 96ರ ಅಡಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ರಾಮನಗರ ತಹಸೀಲ್ಧಾರ್ ನಟೇಶ್ರವರು ನೋಟೀಸಿನಲ್ಲಿ ಹೇಳಿದ್ದಾರೆ. ಆದರೆ ನಿತ್ಯಾನಂದ ಮಾತ್ರ ಕಾಣದಂತೆ ಮಾಯವಾಗಿದ್ದಾನೆ.
ದಾನವಾಗಿ ಪಡೆದ ಜಮೀನನ್ನು ಮಠದ ಅಥವಾ ಕಮಿಟಿಯ ಹೆಸರಿನಲ್ಲಿ ರಿಜಿಸ್ಟರ್ ಮಾಡಿಸದೇ ತನ್ನ ಹೆಸರಿಗೇ ನಿತ್ಯಾನಂದ ರಿಜಿಸ್ಟರ್ ಮಾಡಿಸಿಕೊಂಡಿದ್ದಾನೆ. ಮುಂದೇನಾದರೂ ಹೆಚ್ಚು ಕಡಿಮೆಯಾದರೆ ಭಕ್ತರಿಗೆ ಉಂಡೆ ನಾಮ ಇಕ್ಕಿ ಆಸ್ತಿ ಲಪಟಾಯಿಸಬಹುದೆಂಬ ದುರಾಲೋಚನೆಯಿಂದಲೇ ಈ ನಿತ್ಯಾನಂದ ಆಸ್ತಿಯನ್ನೆಲ್ಲಾ ತನ್ನ ಹೆಸರಿನಲ್ಲೇ ಉಳಿಸಿಕೊಂಡಿದ್ದಾನೆಂದು ಹೇಳಲಾಗಿದೆ.
ಬಿಡದಿಯ ಬಳಿಯಿರುವ ಜಮೀನು ಇಂದು ಸುಮಾರು 100 ಕೋಟಿ ಬೆಲೆ ಬಾಳುತ್ತದೆಂದು ಅಂದಾಜಿಸಲಾಗಿದೆ. ಕೃಷಿ ಚಟುವಟಿಕೆ ನಡೆಸುಸತ್ತಿದ್ದ ಜಮೀನನ್ನು ದಾನವಾಗಿ ಪಡೆದ ನಿತ್ಯಾನಂದ ಕೇವಲ ಒಂದು ಎಕರೆಯನ್ನ ಮಾತ್ರ ಭೂಪರಿವರ್ತನೆ ಮಾಡಿಸಿಕೊಂಡಿದ್ದಾನೆ. ಉಳಿದ ಜಮೀನಿನಲ್ಲಿ ಭರ್ಜರಿ ಬಿಲ್ಡಿಂಗ್ಗಳು ಕುಟೀರಗಳು ಧ್ಯಾನಕೇಂದ್ರಗಳನ್ನ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾನೆ.
ನಿತ್ಯಾನಂದ ಬಿಡದಿಯ 23 ಎಕರೆ ಭೂಮಿಯಲ್ಲಿ ದೊಡ್ಡ ಬಿಲ್ಡಿಂಗ್ಗಳು, ಕುಟೀರಗಳು, ಮತ್ತಿತರ ಕಟ್ಟಡಗಳನ್ನ ನಿರ್ಮಾಣ ಮಾಡಲಾಗಿದೆ. ಇದೇ ಜಮೀನಿನಲ್ಲಿ ವೈದ್ಯ ಸರೋವರದ ಹೆಸರಿನಲ್ಲಿ 21 ಅಡಿ ಎತ್ತರದ ಲಿಂಗ ಮತ್ತು ಸಾವಿರದ ಒಂದು ಲಿಂಗವನ್ನ ಪುಷ್ಕರಣಿಯಲ್ಲಿ ನಿರ್ಮಾಣ ಮಾಡಿ ಪಾಪ ನಿವಾರಣೆಗಾಗಿ ವೈದ್ಯ ಸರೋವರದಲ್ಲಿ ಮಿಂದೇಳಿ ಎಂದು ನಿತ್ಯಾನಂದ ಭಕ್ತರನ್ನ ನಂಬಿಸುತ್ತಿದ್ದ. ಆದರೆ ನಿತ್ಯಾನಂದನೇ ಮಾಯಾಂಗಿನಿ ರಂಜಿತಾಳ ಕಾಮಸೆರೆಯ ಪಾಪದ ಕೂಪದಲ್ಲಿ ಸಿಕ್ಕಿ ನರಳುವಂತಾಗಿದೆ.