ದಿಲ್ಲಿ : 'ನೈಸ್' ಆದ ಗೌಡರ ದರ್ಬಾರ್
ಈ ಸಂದರ್ಭದಲ್ಲಿ ಪ್ರತಿಭಟನಾಕಾರನ್ನು ಉದ್ದೇಶಿಸಿ ಮಾತನಾಡಿದ ದೇವೇಗೌಡ, ರಾಜ್ಯ ಸರಕಾರ ಮತ್ತು ಹಿಂದಿನ ಸರಕಾರಗಳು ನೈಸ್ ಯೋಜನೆಯಲ್ಲಿ ನಡೆಸಿರುವ ಅಕ್ರಮಗಳನ್ನು ವಿವರವಾಗಿ ಬಿಚ್ಚಿಟ್ಟರು. ನೈಸ್ ಕಾರಿಡಾರ್ ಯೋಜನೆಯಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರದ ನಡೆದಿದೆ. ರೈತರಿಗೆ ಮೋಸ ಮಾಡಲಾಗಿದೆ. ರೈತರ ಸಾವಿರಾರು ಕೃಷಿ ಭೂಮಿಯನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಸರಕಾರ ಯೋಜನೆ ಅಗತ್ಯಕ್ಕಿಂತ ಹೆಚ್ಚು ಭೂಮಿ ನೀಡಿದೆ ಎಂದು ವಾಗ್ದಾಳಿ ನಡೆಸಿದರು.
ನೈಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧವೂ ಕಿಡಿಕಾರಿದ ಗೌಡರು, ನೈಸ್ ಯೋಜನೆ ಗೊಂದಲವಾಗಲು ಹಿಂದಿನ ಕಾಂಗ್ರೆಸ್ ನಾಯಕರು ಕಾರಣ ಎಂದು ಟೀಕಿಸಿದರು. ನೈಸ್ ಹಗರಣವನ್ನು ಲೋಕಸಭೆಯಲ್ಲಿ ಚರ್ಚೆ ನಡೆಸುತ್ತೇನೆ. ಈ ಮೂಲಕ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮೇಲೆ ರೈತರ ಭೂಮಿ ಉಳಿಸಿ ಎಂದು ಒತ್ತಡ ಹೇರುವುದಾಗಿ ಹೇಳಿದರು. ನೈಸ್ ಯೋಜನೆ ಹಗರಣವಾಗಿದ್ದು, ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು ಎಂದು ಅವರು ಆಗ್ರಹಿಸಿದರು.
ದೇವೇಗೌಡರ ನೈಸ್ ಹೋರಾಟಕ್ಕೆ ಎಡಪಕ್ಷಗಳ ನಾಯಕ ಪ್ರಕಾಶ್ ಕಾರಟ್, ತೆಲುಗು ದೇಶಂ ಪಕ್ಷದ ಸಂಸದರು, ಸಮಾಜವಾದಿ ಪಕ್ಷ ಸಂಸದರು, ಅಜಿತ್ ಸಿಂಗ್ ಸೇರಿದಂತೆ ಅನೇಕ ಪಕ್ಷಗಳು ಬೆಂಬಲ ನೀಡಿದವು. ಲೋಕಸಭೆಯಲ್ಲಿ ನೈಸ್ ವಿಚಾರವನ್ನು ಚರ್ಚಿಸುವುದಾಗಿ ಅವರು ಹೇಳಿದರು. ಇದಕ್ಕೂ ಮುನ್ನ ದೇವೇಗೌಡ, ನೈಸ್ ಹಗರಣದ ಸಮಗ್ರ ವರದಿಯನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಸಲ್ಲಿಸಿ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.