ಶಿವಮೊಗ್ಗ ಗಲಭೆಗೆ ಅನಕ್ಷರತೆಯೇ ಕಾರಣ : ಸಾಂಗ್ಲಿಯಾನಾ
ನಗರದ ಗಲಭೆ ಪೀಡಿತ ಪ್ರದೇಶಗಳಾದ ಲಷ್ಕರ್ ಮೊಹಲ್ಲಾ, ಎಂ.ಕೆ.ಕೆ.ರಸ್ತೆ, ಕೆ.ಆರ್.ಪುರಂ ರಸ್ತೆ, ಗೋಪಿಸರ್ಕಲ್, ಅಮೀರ್ ಅಹಮದ್ ಸರ್ಕಲ್, ನೆಹರು ರಸ್ತೆ, ಬಿ.ಹೆಚ್.ರಸ್ತೆ, ವಿದ್ಯಾನಗರ, ನಂಜಪ್ಪ ಲೇಔಟ್, ಎನ್.ಟಿ.ರಸ್ತೆ, ಸೀಗೆಹಟ್ಟಿ, ಟಿಪ್ಪುನಗರ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿ ನಂತರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದ ಗಲಭೆಗೆ ಅನಕ್ಷರತೆಯೇ ಮುಖ್ಯ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾ.1ರಂದು ನಡೆದ ಗಲಭೆ ಕೇವಲ ಪ್ರಚೋದನೆಯಿಂದ ನಡೆದಿದ್ದು. ಒಂದು ಗುಂಪಿನ ಈ ರೀತಿಯ ಹೆಜ್ಜೆಯಿಂದಾಗಿ ದೊಡ್ಡದೊಂದು ಗಲಭೆ ನಡೆದುಹೋಯಿತು. ತಿಳಿವಳಿಕೆಯಿಲ್ಲದ ಒಂದಿಷ್ಟು ಜನ ಮಾಡಿದ ತಪ್ಪಿದು. ಗಲಭೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೂ ಸೇರಿದಂತೆ ಜನಪ್ರತಿನಿಧಿಗಳು ಭೇಟಿ ಮಾಡಬಹುದಿತ್ತು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗಲಭೆ ಪೀಡಿತರಿಗೆ ಸಾಂತ್ವಾನ ನೀಡಿದ ಸಾಂಗ್ಲಿಯಾನ, ಇಂಥದ್ದೊಂದು ಗಲಭೆ ಮತ್ತೆ ಶಿವಮೊಗ್ಗದಂತಹ ನಗರದಲ್ಲಿ ನಡೆಯದಿರಲಿ ಎಂದು ಮನವಿ ಮಾಡಿಕೊಂಡರು. ಜಿಲ್ಲಾ ರಕ್ಷಣಾಧಿಕಾರಿ ಎಸ್.ಮುರುಗನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.