ಕರಾವಳಿಗೆ ಬಜೆಟ್ ಕೊಡುಗೆ ಘೋಷಣೆ ಮಾತ್ರ
* ಚಿದಂಬರ ಬೈಕಂಪಾಡಿ, ಮಂಗಳೂರು
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಹು ನಿರೀಕ್ಷಿತವಾದ ಬಜೆಟ್ ಮಂಡಿಸಿದ್ದಾರೆ, ಆದರೆ ಜನಸಾಮಾನ್ಯರ ನಿರೀಕ್ಷೆಗಳು ಮಾತ್ರ ಮರೀಚಿಕೆಗಳಾಗಿವೆ. ಸಹಜವಾಗಿಯೇ ಮುಖ್ಯಮಂತ್ರಿಯಾದವರಿಗೆ ಸಮಗ್ರ ರಾಜ್ಯದ ಹಿತಕಾಪಾಡುವ ಹೊಣೆಗಾರಿಕೆ ಇರುತ್ತದೆ. ಎಲ್ಲ ವರ್ಗ, ಜಾತಿ, ಪಂಗಡದವರನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಬೇಕಾಗುತ್ತದೆ. ಆದರೆ ಬೆಳೆಯುತ್ತಿರುವ ನಗರಗಳನ್ನು ಗಮನದಲ್ಲಿಟ್ಟುಕೊಂಡು ಆದ್ಯತೆ ಮೇಲೆ ಅನುದಾನ ಒದಗಿಸುವ ಜವಾಬ್ದಾರಿಯೂ ಇರುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಕರಾವಳಿ ಭಾಗ ಬೆಂಗಳೂರನ್ನು ಬಿಟ್ಟರೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರದೇಶ. ಕರಾವಳಿ ಅಭಿವೃದ್ದಿ ಪ್ರಾಧಿಕಾರದ ರಚನೆಯನ್ನು ಬಿಟ್ಟರೆ ಈ ಭಾಗದ ಬೆಳವಣಿಗೆಗೆ ಪೂರಕವಾಗಿ ಈ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎನ್ನುವುದನ್ನು ಖಂಡಿತಕ್ಕೂ ಪ್ರಶ್ನಿಸಲೇ ಬೇಕಾಗುತ್ತದೆ.
ಈ ಸಾಲಿನ ಬಜೆಟ್ ನೋಡಿದರೆ ಹೊಸ ಯೋಜನೆಗಳ ಘೋಷಣೆ ಮಟ್ಟಿಗೆ ಎರಡು ಮಾತಿಲ್ಲ. ಆದರೆ ಈ ಹಿಂದಿನ ಘೋಷಣೆಗಳ ಸ್ಥಿತಿ-ಗತಿ ಏನು ಯಾರಿಗೆ ಗೊತ್ತು? ಆಡಳಿತ ಪಕ್ಷ ಸಹಜವಾಗಿಯೇ ಜನಪರ, ಅಭಿವೃದ್ದಿಪರ ಎಂದು ಹೊಗಳಬಹುದು ಮತ್ತು ಹೊಗಳಲೇಬೇಕು. ಆದರೆ ಪ್ರತಿಪಕ್ಷದವರಿಂದ ಇಂಥ ಹೊಗಳಿಕೆ ನಿರೀಕ್ಷೆ ಮಾಡುವಂತಿಲ್ಲ. ಆದ್ದರಿಂದಲೇ ವಿರೋಧ ಪಕ್ಷಗಳು ಸಾರಾಸಗಟಾಗಿ ವಿರೋಧಿಸುತ್ತಿವೆ.
ಕರಾವಳಿಗೆ ಮೋನೋ ರೈಲು, ಸ್ಕೈಬಸ್, ಮಂಗಳ ಕಾರ್ನೀಶ್ ಇತ್ಯಾದಿ... ಇತ್ಯಾದಿ ಘೋಷಣೆಗಳಾಗಿದ್ದವು. ಅವುಗಳ ಸ್ಥಿತಿ ಈಗ ಏನಾಗಿದೆ? ಕರಾವಳಿಯಲ್ಲಿ ಪ್ರತೀ ವರ್ಷ ಮಳೆಗಾಲದಲ್ಲಿ ಸಮಸ್ಯೆ ಒಡ್ಡುವ ಕಡಲು ಕೊರೆತಕ್ಕೆ ಈ ಬಜೆಟ್ ಏನು ಹೇಳಿದೆ ? ಬಜೆಟ್ ತಯಾರಿಗೂ ಮುನ್ನ ಆಯಾಯ ಭಾಗದ ಶಾಸಕರನ್ನು ಕರೆದು (ಪ್ರತಿಪಕ್ಷದವರನ್ನೂ ಸಹಿತ) ಚರ್ಚಿಸಿ ಆದ್ಯತೆ ಗುರುತಿಸಿಕೊಳ್ಳುವುದು ಸಂಪ್ರದಾಯ. ಕಳೆದ ಒಂದು ದಶಕದಿಂದ ಈ ಸಂಪ್ರದಾಯಕ್ಕೆ ತಿಲಾಂಜಲಿ ಕೊಡಲಾಗಿದೆ. ಹೋಗಲಿ ಆಡಳಿತ ಪಕ್ಷದವರನ್ನಾದರೂ ಕರೆದು ಆದ್ಯತೆ ಗುರುತಿಸಲಾಗಿದೆಯೇ ಎಂದು ಕೇಳಿ ನೋಡಿ.
ನೇತ್ರಾವತಿ ನದಿ ತಿರುಗಿಸಲು ಹೊರಟವರಿಗೆ ಮಳೆಗಾಲದಲ್ಲಿ ಅವಳಿ ಜಿಲ್ಲೆಯ ಹತ್ತಕ್ಕೂ ಹೆಚ್ಚು ದೊಡ್ಡ ನದಿಗಳ ನೀರು ಸಮುದ್ರಕ್ಕೆ ಹರಿದು ವ್ಯರ್ಥವಾಗಿ ಹೋಗುತ್ತಿದೆಯಲ್ಲಾ ಏನು ಮಾಡಿದ್ದಾರೆ ? ಹಣಕಾಸು ಆಯೋಗದ ಅಧ್ಯಕ್ಷರಾಗಿರುವ ಎ.ಜಿ.ಕೊಡ್ಗಿಯವರು ಅವಿಭಜಿತ ಜಿಲ್ಲಾ ಪರಿಷತ್ ಸದಸ್ಯರಾಗಿದ್ದಾಗ (ಆಗ ಕಾಂಗ್ರೆಸ್ನಲ್ಲಿದ್ದರು) ಕರಾವಳಿಯ ನದಿ ಜೋಡಣೆ ಕುರಿತು ಜಿಲ್ಲಾ ಪರಿಷತ್ಗೆ ವರದಿ ಕೊಟ್ಟಿದ್ದರು. ಆಗಿನ ಜಿಲ್ಲಾ ಪರಿಷತ್ ಅಧ್ಯಕ್ಷರಾಗಿದ್ದ ಕೆ.ಸಿ.ಕುಂದರ್ ಆಸಕ್ತಿ ತೋರಿಸಿ ನಬಾರ್ಡ್, ವಿಶ್ವಬ್ಯಾಂಕ್ ಸಹಿತ ಹಲವು ಹಣಕಾಸು ಸಂಸ್ಥೆಗಳ ಮೊರೆ ಹೋಗಿದ್ದರು, ಆದರೆ ಅದು ಕೈಗೂಡಲಿಲ್ಲ. ಎರಡೂವರೆ ದಶಕಗಳ ನಂತರ ದೊಡ್ಡ ಹುದ್ದೆಯಲ್ಲಿರುವ ಕೊಡ್ಗಿಯವರಿಗೆ ತಾವೇ ಸಿದ್ದಪಡಿಸಿದ ನದಿಜೋಡಣೆ ಯೋಜನೆಗೆ ಮುಖ್ಯಮಂತ್ರಿಗಳ ಮನವೊಲಿಸಲು ಯಾಕೆ ಆಗಿಲ್ಲ ?
ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಕಾಲದಲ್ಲಿ ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ವಾರಾಹಿ ಯೋಜನೆಗೆ ಒಂದೇ ದಿನ ಶಿಲಾನ್ಯಾಸ ಮಾಡಲಾಗಿತ್ತು. ಆಗ ಈ ಯೋಜನೆಗಳಿಗೆ ಒತ್ತಾಸೆ ನೀಡಿದ್ದವರು ಆಗಿನ ರಾಜ್ಯದ ಹಣಕಾಸು ಸಚಿವರು ಮತ್ತು ಈಗಿನ ಕೇಂದ್ರ ಸರ್ಕಾರದಲ್ಲಿ ಕಾನೂನು ಸಚಿವರಾಗಿರುವ ಎಂ.ವೀರಪ್ಪ ಮೊಯ್ಲಿ ಅವರು ಎನ್ನುವುದು ಈಗಿನ ರಾಜಕಾರಣಿಗಳಿಗೂ ಗೊತ್ತಿಲ್ಲ, ಹೊಸತಲೆಮಾರಿನ ಮಾಧ್ಯಮದವರಿಗೂ ಗೊತ್ತಿಲ್ಲ. ದುರಂತವೆಂದರೆ ಈ ಕಾಮಗಾರಿಗಳ ಗುತ್ತಿಗೆ ವಹಿಸಿಕೊಂಡವರು ಈಗ ಕೋಟ್ಯಾಧೀಶರು, ಸಕ್ಕರೆ ಕಾರ್ಖಾನೆ ಯಂತ್ರಗಳಿಗೆ ತುಕ್ಕು ಹಿಡ್ಡಿದಿದೆ, ಕಬ್ಬು ಬೆಳೆದು ಒದಗಿಸಿದ ರೈತರ ಮನೆ ಮಠ ಜಪ್ತಿಯಾಗಿದೆ. ಕಾರ್ಖಾನೆ ಭೂಮಿಯನ್ನು ರಿಯಲ್ ಎಸ್ಟೇಟ್ ದಂಧೆಯವರಿಗೆ ಮಾರಲು ಸಂಚು ನಡೆದಿದೆ. ಸಾಲ ಒದಗಿಸಿದವರಿಗೆ ಬಡ್ಡಿ ತುಂಬಲು ಕಾರ್ಖಾನೆಯ ಭೂಮಿ ಮಾರಲು ವಿಧಾನ ಸಭೆಯಲ್ಲಿ ಪ್ರಶ್ನೆಗೆ ಉತ್ತರಿಸುತ್ತಾರೆ ಅಂದರೆ ಸರ್ಕಾರಗಳ ಚಿಂತೆ ಯಾವದಿಕ್ಕಿನಲ್ಲಿದೆ ಎನ್ನುವುದು ಅರ್ಥವಾಗಿ ಬಿಡುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಸಕ್ಕರೆ ಕಾರ್ಖಾನೆ ಉಳಿಸಲು ಏನಾದರೂ ಯೊಚನೆ ಮಾಡಿದರೆ ? ಅಥವಾ ಈ ಸಾಲಿನ ಬಜೆಟ್ನಲ್ಲಿ ಸಂದೇಶವಾದರೂ ಇದೆಯೇ?
ಕ್ಷಮಿಸಿ ಇದ್ದುದನ್ನು ಇದ್ದಂತೆ ಹೇಳಿದ್ದಕ್ಕೆ. ಕರಾವಳಿ ಭಾಗದ ಜನಪ್ರತಿನಿಧಿಗಳು ಸಿಟ್ಟಾಗಬೇಡಿ, ಕೂಲ್ ಆಗಿ ಸ್ವಲ್ಪ ಹೊತ್ತು ಯೋಚಿಸಿ, ವಾಸ್ತವ ಅರಿವಾಗುತ್ತದೆ. ರಾಜಕೀಯ ಬೇಕು ಚುನಾವಣೆ ಕಾಲಕ್ಕೆ ಮಾತ್ರ, ಉಳಿದ ಕಾಲದಲ್ಲಿ ಅಭಿವೃದ್ದಿಯೇ ಮಂತ್ರವಾಗಲಿ ಎನ್ನುವುದು ಆಶಯ.