ಮಹಿಳೆಯರು ಬರ್ತಾರೆ ಜಾಗ ಖಾಲಿಮಾಡಿ
ಮಹಿಳಾ ಮಸೂದೆ ಜಾರಿಗೆ ಬಂದರೆ ಏನಾಗುತ್ತದೆ? ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಶೇ. 33ರಷ್ಟು ಸ್ಥಾನಗಳನ್ನು ಪುರುಷ ರಾಜಕಾರಣಿಗಳು ಮಹಿಳಾ ರಾಜಕಾರಣಿಗಳಿಗೆ ತೆರವು ಮಾಡಿಕೊಡಬೇಕಾಗುತ್ತದೆ. ಶೇ.33ರಷ್ಟು ಮೀಸಲಾತಿ ನೀಡುವುದು ಖಾತ್ರಿಯಾದರೆ, ರಾಜ್ಯದಲ್ಲಿರುವ 224 ಸದಸ್ಯರಿರುವ ವಿಧಾನಸಭೆಯಲ್ಲಿ 74 ಕ್ಷೇತ್ರಗಳು ಮಹಿಳೆಯರ ಪಾಲಾಗುತ್ತವೆ.
ಶೇ.49.49ಕ್ಕಿಂತ ಹೆಚ್ಚಿನ ಮಹಿಳಾ ಮತದಾರರು ಇರುವ ವಿಧಾನಸಭಾ ಕ್ಷೇತ್ರಗಳು ಮಹಿಳಾ ಮೀಸಲು ಕ್ಷೇತ್ರಗಳಾಗಿ ಪರಿವರ್ತನೆಯಾಗಲಿವೆ. ಇದರಡಿ ಕ್ಷೇತ್ರಗಳನ್ನು ಮಹಿಳೆಯರಿಗೆ ಹಂಚಿಕೆ ಮಾಡಿದರೆ, ರಾಜ್ಯದ ಕೆಲ ಘಟಾನುಘಟಿ ನಾಯಕರ ಕ್ಷೇತ್ರಕ್ಕೆ ಮಹಿಳಾಮಣಿಯರು ಲಗ್ಗೆ ಇಡುವುದು ಖಚಿತ. ಒಂದು ವಿಶೇಷ ಸಂಗತಿ ಎಂದರೆ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಈ ಮಸೂದೆಗೆ ಅಂಗೀಕಾರಕ್ಕೆ ಬೆಂಬಲ ವ್ಯಕ್ತಪಡಿಸಿವೆ. ರಾಜ್ಯದಲ್ಲಿ ಇದರ ಪರಿಣಾಮ ಭಾರಿ ಪ್ರಮಾಣದಲ್ಲಿ ಬೀರುವ ಸಾಧ್ಯತೆ ಇದ್ದು, ಪ್ರಸ್ತುತ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ 6 ಮಂದಿ ಸಚಿವರು ಹಾಗೂ ಸುಮಾರು 20ಕ್ಕೂ ಶಾಸಕರು ತಮ್ಮ ಕ್ಷೇತ್ರವನ್ನು ಖಾಲಿ ಮಾಡಬೇಕಾಗುತ್ತದೆ.
ಮುಖ್ಯವಾಗಿ ಸಚಿವರಾದ ಶ್ರೀರಾಮುಲು, ಮುರುಗೇಶ್ ನಿರಾಣಿ, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ್, ಶಿವನಗೌಡ ನಾಯಕ ಹಾಗೂ ಶಿವರಾಜ ತಂಗಡಗಿ ಪ್ರತಿನಿಧಿಸುತ್ತಿರುವ ಕ್ಷೇತ್ರಗಳಲ್ಲಿ ಮಹಿಳಾ ಮತದಾರರ ಶೇ 50ಕ್ಕಿಂತ ಹೆಚ್ಚಿದೆ. ಈ ಕಾರಣದಿಂದ ಈ ಸಚಿವರು ತಮ್ಮ ಕ್ಷೇತ್ರವನ್ನು ತೆರವುಗೊಳಿಸುವ ಪ್ರಸಂಗ ಎದುರಾಗಬಹುದು.
ಮೈಸೂರಿನ ತನ್ವೀರ್ ಸೇಠ್ (ನರಸಿಂಹರಾಜ), ರಾಮದಾಸ್(ಕೃಷ್ಣರಾಜ್), ಶಂಕರಲಿಂಗೇಗೌಡ (ಚಾಮರಾಜ) ಹಾಗೂ ಸಾರಾ ಮಹೇಶ್(ಕೃಷ್ಣರಾಜನಗರ), ಮಂಡ್ಯ ಜಿಲ್ಲೆಯಲ್ಲಿ ರಮೇಶ್ ಬಂಡಿಸಿದ್ದೇಗೌಡ(ಶ್ರೀರಂಗಪಟ್ಟಣ), ಸುರೇಶ್ ಗೌಡ(ನಾಗಮಂಗಲ), ಪುಟ್ಟರಾಜು(ಮೇಲುಕೋಟೆ), ರಾಯಚೂರು-ಕೊಪ್ಪಳ ಜಿಲ್ಲೆಯಲ್ಲಿ ಗಂಗಾವತಿ, ಕೊಪ್ಪಳ, ಕನಕಗಿರಿ, ಗ್ರಾಮೀಣ ಮಸ್ಕಿ, ಮಾನ್ವಿ, ಸಿಂಧನೂರು, ದೇವದುರ್ಗ, ಲಿಂಗಸೂಗೂರು, ಕೊಡಗು ಜಿಲ್ಲೆಯಲ್ಲಿ ಮಡಿಕೇರಿ, ಹುಬ್ಬಳ್ಳಿ-ಧಾರವಾಡ ಪೂರ್ವ, ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭೆ ಕ್ಷೇತ್ರಗಳು ಮಹಿಳೆಯರ ವಶವಾಗಲಿವೆ.
ಯಮಕನಮರಡಿ, ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ, ಗೋಕಾಕ್, ಬಾದಾಮಿ, ಹುನಗುಂದ, ಜಮಖಂಡಿ, ಬಾಗಲಕೋಟಿ, ಗುರುಮಿಟ್ಕಲ್, ಚಿತ್ತಾಪೂರ್, ಯಾದಗಿರಿ, ಶಹಾಪೂರ, ಜೇವರ್ಗಿ, ಶಿರಗುಪ್ಪ, ಕಂಪ್ಲಿ, ಹಿರಿಯೂರು, ಚಿತ್ರದುರ್ಗ ವಿಧಾನಸಭೆ ಕ್ಷೇತ್ರಗಳು ಮಹಿಳೆಯರು ತೆಕ್ಕೆಗೆ ಸೇರಲಿವೆ.