ಕೊನೆಗೂ ರಾಜ್ಯಸಭೆಯಲ್ಲಿ ಮಹಿಳೆಗೆ ಜಯ
ಆಡಳಿತರೂಢ ಯುಪಿಎ, ಬಿಜೆಪಿ ಮತ್ತು ಎಡಪಕ್ಷಗಳು ಮಸೂದೆಗೆ ಬೆಂಬಲ ವ್ಯಕ್ತಪಡಿಸಿದರೆ, ಈ ಮಧ್ಯೆ, ಆರ್ ಜೆಡಿ, ಸಮಾಜವಾದಿ ಮತ್ತು ಎಲ್ ಜೆಪಿ ಪಕ್ಷಗಳು ಮಹಿಳಾ ಮೀಸಲಾತಿ ವಿಧೇಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದವು. ಮಸೂದೆಯನ್ನು ವಾಪಸ್ ತಗೆದುಕೊಳ್ಳಿ, ಮಸೂದೆಯನ್ನು ವಾಪಸ್ ತೆಗೆದುಕೊಳ್ಳಿ ಎಂದು ಬೊಬ್ಬೆ ಹಾಕುತ್ತಿದ್ದು, ಯಾವುದನ್ನು ಲೆಕ್ಕಿಸದ ಯುಪಿಎ ಸರಕಾರ ಮಸೂದೆ ಅಂಗೀಕಾರಕ್ಕೆ ಮುಂದಾಯಿತು. ಆದರೆ, ಎಸ್ ಪಿ, ಆರ್ ಜೆಡಿ ಸಂಸದರ ಗದ್ದಲ, ಕೂಗಾಟ, ಚೀರಾಟ ಮುಗಿಲು ಮುಟ್ಟಿತ್ತು. ಇದು ಅನ್ಯಾಯ, ಇದು ಅನ್ಯಾಯ ಎಂಬ ಕೂಗುಗಳು ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿತು. ಯಾವುದೇ ಚರ್ಚೆ ಇಲ್ಲದೆ ಮಸೂದೆಯನ್ನು ಮತದಾನಕ್ಕೆ ಮೂಲಕ ಅಂಗೀಕರಿಸಲು ಮುಂದಾಗಿದ್ದು, ಮಸೂದೆ ವಿರೋಧಿಸುವ ಪಕ್ಷಗಳನ್ನು ಮತ್ತಷ್ಟು ಕೆರಳಿಸುವಂತೆ ಮಾಡಿತು.
ಇದಕ್ಕೂ ಮುಂಚೆ ರಾಜ್ಯಸಭೆಯಲ್ಲಿ ಗದ್ದಲವೆಬ್ಬಿಸಿದ್ದ ಎಸ್ ಪಿ, ಆರ್ ಜೆಡಿ ಸಂಸದರಾದ, ಸುಭಾಶ್ ಯಾದವ್, ಸಭೀರ್ ಅಲಿ, ವೀರ್ ಪಾಲ್ ಸಿಂಗ್ ಯಾದವ್, ನಂದ ಕಿಶೋರ್ ಯಾದವ್, ಅಮೀರ್ ಕಲಂ ಖಾನ್, ಅಮಲ್ ಅಖ್ತರ್, ಇಜಾಜ್ ಅಲಿ ಅವರನ್ನು ಮಾರ್ಷಲ್ ಮೂಲಕ ಹೊರಹಾಕಲಾಯಿತು. ಸಂಸತ್ತಿನಲ್ಲಿ ಗದ್ದಲವೆಬ್ಬಿಸಿದ ಕಾರಣ ಸಂವಿಧಾನದ 256 ಕಲಂ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮಹಿಳಾ ಮಸೂದೆಗೆ ಸಂಬಂಧಿಸಿದಂತೆ ಎರಡು ಬಾರಿ ರಾಜ್ಯಸಭೆಯನ್ನು ಮುಂದೂಡಲಾಗಿತ್ತು.