ನಿತ್ಯಾನಂದರಿಗೆ ಮಸಿಬಳಿಯಲು ಪಿತೂರಿ
ನಿತ್ಯಾನಂದ ಮತ್ತು ತೆಲುಗು ನಟಿ ರಂಜಿತಾ ಎಂಬಿಬ್ಬರು ಕಾಮದಾಟದಲ್ಲಿ ಭಾಗಿಯಾಗಿದ್ದಾರೆನ್ನಲಾದ ಸನ್ ಟಿವಿ ಮುಖಾಂತರ ಪ್ರಸಾರವಾದ ವಿಡಿಯೋ ಕ್ಲಿಪಿಂಗ್, ತಲೆಮರೆಸಿಕೊಂಡಿರುವ ನಿತ್ಯಾನಂದನ ಇರುವಿಕೆ ಮತ್ತು ಆಶ್ರಮದ ಸುತ್ತ ಸುತ್ತಿಕೊಂಡಿರುವ ಎಲ್ಲ ಆರೋಪಗಳಿಗೆ ಸ್ಪಷ್ಟನೆ ನೀಡಲು ನಿತ್ಯ ಸಚ್ಚಿದಾನಂದ ಅವರು ಆಶ್ರಮದ ಇತರ ಪದಾಧಿಕಾರಿಗಳೊಂದಿಗೆ ಬಿಡದಿಯಲ್ಲಿರುವ ಆಶ್ರಮದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದರು.
ನಿತ್ಯಾನಂದ ಅವರ ವಿರುದ್ಧ ಮಾಡಿರುವ ಎಲ್ಲ ಆರೋಪಗಳೂ ನಿರಾಧಾರ, ಇದರ ಹಿಂದೆ ವ್ಯವಸ್ಥಿತ ಪಿತೂರಿಯಿದೆ, ವಿಡಿಯೋವನ್ನು ಅತ್ಯಂತ ತಂತ್ರಗಾರಿಕೆಯಿಂದ ತಯಾರಿಸಲಾಗಿದೆ ಎಂದು ಹೇಳಿದ ಸಚ್ಚಿದಾನಂದ, ಪತ್ರಕರ್ತರು ಕೇಳಿದ ಎಲ್ಲ ಪ್ರಶ್ನೆಗಳಿಗೂ ಸಾವಧಾನದ ಆದರೆ ಹಾರಿಕೆಯ ಹಾರಿಕೆಯ ಉತ್ತರ ನೀಡಿದರು. 'ನಾವು ಖಚಿತ ಮಾಹಿತಿ ಸಂಗ್ರಹಣೆ ಮಾಡಿ ಆನಂತರ ಪ್ರತಿಕ್ರಿಯೆ ನೀಡುತ್ತೇವೆ, ಊಹಾಪೋಹಗಳಿಗೆ ಉತ್ತರಿಸುವುದಿಲ್ಲ'ಎಂದು ಹೇಳಿ ನುಣುಚಿಕೊಳ್ಳುತ್ತಿದ್ದರು.
ನಿತ್ಯಾನಂದ ಎಲ್ಲೂ ತಲೆಮರೆಸಿಕೊಂಡಿಲ್ಲ. ಭಕ್ತಾದಿಗಳೊಂದಿಗೆ ಹರಿದ್ವಾರದ ಕುಂಭಮೇಳದಲ್ಲಿ ಭಾಗವಹಿಸಲು ಹೋಗಿದ್ದಾರೆ. ಇಲ್ಲಿಗೆ ಬಂದು ಉತ್ತರಿಸುವ ಕಾತರ ಅವರಿಗೂ ಇದೆ. ಆದರೆ, ಅವರಿಗೆ ರಕ್ಷಣೆಯ ಅಗತ್ಯವಿರುವುದರಿಂದ ಇಲ್ಲಿ ಕಾಣಿಸಿಕೊಳ್ಳುತ್ತಿಲ್ಲ. 'ನಿತ್ಯಾನಂದ ಸ್ವಾಮಿಗಳ ಭದ್ರತೆಯ ವಿಷಯದಲ್ಲಿ ಅವರ ಶಿಷ್ಯಕೋಟಿಗೆ ಆತಂಕವಿದೆ, ಇನ್ನೆರಡು ದಿನಗಳಲ್ಲಿ ವಿಡಿಯೋ ಮುಖಾಂತರ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲಿದ್ದಾರೆ ' ಎಂದು ಸಚ್ಚಿದಾನಂದ ಹೇಳಿದರು.
ರಾಸಲೀಲೆಯ ವಿಡಿಯೋದಲ್ಲಿ ಇದ್ದಾಳೆನ್ನಲಾದ ರಂಜಿತಾ ಎಂಬ ನಟಿ ಆಶ್ರಮಕ್ಕೆ ಯೋಗ ಕಲಿಯಲು ಬರುತ್ತಿದ್ದಳೆಂದು ಒಪ್ಪಿಕೊಂಡ ಸಚ್ಚಿದಾನಂದ, ಅವಳು ಈಗ ಎಲ್ಲಿದ್ದಾಳೆ ಎಂಬ ಬಗ್ಗೆ ಉತ್ತರಿಸಲು ನಿರಾಕರಿಸಿದರು.
ರಾಸಲೀಲೆಯ ಚಿತ್ರೀಕರಣವನ್ನು ಮಾಡಿರುವುದಾಗಿ ಲೆನಿನ್ ಎಂಬ 23 ವರ್ಷದ ಸ್ವಾಮೀಜಿಯ ಕಾರಿನ ಚಾಲಕ ಹೇಳಿಕೊಂಡಿದ್ದಾನೆ. ಈ ಕುರಿತು ಪ್ರತಿಕ್ರಿಯಿಸಿದ ಸಚ್ಚಿದಾನಂದ, ಲೆನಿನ್ ಪಿಯುಸಿ ಕೂಡ ಪಾಸಾಗಿಲ್ಲ, ಆತನ ಹೇಳಿಕೆಯನ್ನು ನಂಬಲಾಗದು. ವಿಡಿಯೋ ಗುಣಮಟ್ಟ ಕೂಡ ಕಳಪೆಯಾಗಿದೆ. ಇದರ ಹಿಂದೆ ಯಾರ್ಯಾರಿದ್ದಾರೆ, ಯಾಕೆ ಮಾಡಿದ್ದಾರೆ, ಹೇಗೆ ಮಾಡಿದ್ದಾರೆ ಎಂಬ ಪ್ರಶ್ನೆಗಳಿಗೆ ಉತ್ತರಿಸಲಾರೆ. ಅದನ್ನು ಮಾಡಬೇಕಾದವರು ತನಿಖಾ ಪತ್ರಕರ್ತರು ಎಂದು ಪತ್ರಕರ್ತರ ಮೇಲೆಯೇ ಬಾಣ ತಿರುಗಿಸಿದರು.
ಲೆನಿನ್ ಎಂಬ ಯುವಕನ ವಿರುದ್ಧ ಪೊಲೀಸರಿಗೆ ಯಾಕೆ ದೂರು ನೀಡಿಲ್ಲ ಎಂಬ ಪ್ರಶ್ನೆಗೆ, ಮಾಹಿತಿಯನ್ನು ಕಲೆಹಾಕಿದ ನಂತರ ದೂರು ನೀಡುವುದಾಗಿ ತಿಳಿಸಿದರು. ಅಲ್ಲದೆ, ಏಳು ವರ್ಷದ ಮಗುವನ್ನು ನಿತ್ಯಾನಂದ ಅಪಹರಿಸಿದ್ದಾನೆ ಮತ್ತು ಕೆನಡಾದ ವ್ಯಕ್ತಿಯೊಬ್ಬರು ಆಶ್ರಮದಲ್ಲಿ ಸಂದೇಹಾತ್ಮಕವಾಗಿ ಮೃತಪಟ್ಟಿರುವ ಬಗ್ಗೆಯೂ ಅವರು ಸಮಂಜಸ ಉತ್ತರ ನೀಡಲಿಲ್ಲ.
ನಿತ್ಯ ಜ್ಞಾನಾನಂದ ಮತ್ತು ನಿತ್ಯ ಪ್ರಾಣಾನಂದ ಎಂಬಿಬ್ಬರು ಸ್ವಾಮೀಜಿಗಳೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಸಚ್ಚಿದಾನಂದ, ಆಶ್ರಮದ ಪದಾಧಿಕಾರಿಗಳನ್ನು ಪತ್ರಿಕಾಗೋಷ್ಠಿಯಲ್ಲಿ ಪರೇಡ್ ಮಾಡಿಸಿದರು. ಇಲ್ಲಿ ಎಲ್ಲರೂ ಸಂತುಷ್ಟದಿಂದಿದ್ದಾರೆ. ವಿವಿಧ ಕ್ಷೇತ್ರಗಳಿಂದ ಬಂದಿರುವ ಗೌರವಾನ್ವಿತ ವ್ಯಕ್ತಿಗಳು ಇಲ್ಲಿ ಬರುತ್ತಾರೆ. ಸಾವಿರಾರು ಭಕ್ತಾದಿಗಳು ಕೂಡ ಪ್ರತಿದಿನ ಯೋಗ ಕ್ಯಾಂಪಿನಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿ ಪತ್ರಿಕಾಗೋಷ್ಠಿಗೆ ಮಂಗಳ ಹಾಡಿದರು.