ಮಹಿಳಾ ಮಸೂದೆ ಒಂದು ಸಂಚು : ಮುಲಾಯಂ
ಸದ್ಯದ ರೂಪದಲ್ಲಿ ಮಸೂದೆಗೆ ಅಂಗೀಕಾರ ನೀಡುವುದು ಪ್ರಜಾತಂತ್ರ ವಿರೋಧಿ ಎನಿಸಲಿದೆ. ಈ ಮಸೂದೆ ಸಂಸತ್ತಿಗೆ ಮುಸ್ಲಿಮರು, ಹಿಂದುಳಿದವರು, ದಲಿತರು ಮತ್ತು ಬಡವರು ಪ್ರವೇಶಿಸುವುದನ್ನು ತಡೆವ ತಂತ್ರವಾಗಿದೆ. ಜೊತೆಗೂಡಿದ ಕಾಂಗ್ರೆಸ್ ಹಾಗೂ ಬಿಜೆಪಿ ಸಂಸತ್ನಲ್ಲಿ ಮಸೂದೆ ಅಂಗೀಕಾರಕ್ಕೆ ಸಾಕಷ್ಟು ಸದಸ್ಯಬಲ ಹೊಂದಿದ್ದರಿಂದ ಇಂದೇ ಅದು ಸಂಸತ್ ಒಪ್ಪಿಗೆ ಪಡೆಯಬಲ್ಲುದೆಂದು ಯಾದವ್ ಹೇಳಿದರು.
ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವುದಕ್ಕೆ ತನ್ನ ಪಕ್ಷದ ವಿರೋಧವಿಲ್ಲ ಎಂದ ಯಾದವ್, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದೊಳಗೆ ಮಹಿಳೆಯರಿಗೆ ಶೇ.20 ಚುನಾವಣಾ ಟಿಕೆಟ್ಗಳನ್ನು ಮೀಸಲಿಡುವ ಧೈರ್ಯ ತೋರಲಿ ಎಂದು ಸವಾಲು ಹಾಕಿದರು. ಶೇ.33 ಮೀಸಲಾತಿ ಮಸೂದೆಯನ್ನು ಕೈಬಿಡಬೇಕು. ಅದರ ಬದಲು ಪಕ್ಷಗಳು ಶೇ.20 ಚುನಾವಣಾ ಟಿಕೆಟ್ಗಳನ್ನು ಮಹಿಳೆಯರಿಗೆ ಕಡ್ಡಾಯವಾಗಿ ಮೀಸಲಿಡುವಂತೆ ಮಾಡಬೇಕು ಎಂದರು.
ಮಹಿಳೆಯರಿಗೆ ಶೇ.33 ಸ್ಥಾನ ಮೀಸಲಾತಿ ಮಸೂದೆಗೆ ಸಂಸತ್ ಅಂಗೀಕಾರ ಲಭಿಸಿದರೆ ಮುಸ್ಲಿಂ, ಹಿಂದುಳಿದವರು, ದಲಿತರಿಗೆ ಅವರ ಜನಸಂಖ್ಯೆ ಆಧಾರದಲ್ಲಿ ಕೋಟಾ-ನಿಗದಿಯಾಗಲೆಂದು ಯಾದವ್ ಹೇಳಿದರು. ಸೋಮವಾರದಂದು ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕ ಮಂಡನೆ ಆಗಲಿದೆ.