ಕರ್ನಾಟಕ ಪೊಲೀಸರ ಕೈಗೆ ನಿತ್ಯಾನಂದನ ಕೇಸ್
ಚೆನ್ನೈ, ಮಾ. 6: ವಿವಾದಿತ ನಿತ್ಯಾನಂದ ಸ್ವಾಮಿಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಕರ್ನಾಟಕ ಪೊಲೀಸರಿಗೆ ಒಪ್ಪಿಸಲು ತಮಿಳುನಾಡು ಸರ್ಕಾರ ಇಂದು ನಿರ್ಧರಿಸಿದೆ. ದೇವ ಮಾನವ, ಸ್ವಯಂ ಸ್ವಾಮೀಜಿ ನಿತ್ಯಾನಂದನ ಮೇಲೆ ಹಲವಾರು ಗುರುತರ ಆರೋಪಗಳಿದ್ದು,ಎಲ್ಲಾ ಪ್ರಕರಣಗಳ ತನಿಖೆಯನ್ನು ಕರ್ನಾಟಕ ಪೊಲೀಸರು ನಡೆಸಲಿದ್ದಾರೆ ಎಂದು ತಮಿಳುನಾಡು ಸರ್ಕಾರದ ಮೂಲಗಳು ತಿಳಿಸಿವೆ.
ವಂಚನೆ, ಹೋಮೊ ಸೆಕ್ಸ್, ಸಾರ್ವಜನಿಕರ ಭಾವನೆಗಳಿಗೆ ಧಕ್ಕೆ, ಬಾಲಕರನ್ನು ಅಕ್ರಮವಾಗಿ ಆಶ್ರಮದಲ್ಲಿ ಇರಿಸಿಕೊಂಡಿರುವುದು ಹಾಗೂ ಮುಖ್ಯವಾಗಿ ಭೂಕಬಳಿಕೆ ಸರ್ಕಾರಿ ಜಮೀನು ದುರ್ಬಳಕೆ ಮುಂತಾದ ಪ್ರಕರಣಗಳನ್ನು ಚೆನ್ನೈ ಹಾಗೂ ಕೊಯಮತ್ತೂರಿನ ಪೊಲೀಸರು ದಾಖಲಿಸಿಕೊಂಡಿವೆ. ನಿತ್ಯಾನಂದನ ಜೊತೆ ಸರಸಕೇಳಿಯಲ್ಲಿದ್ದ ನಟಿ ರಂಜಿತಾಳಿಗಾಗಿ ಚೆನ್ನೈ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ. ನಿತ್ಯಾನಂದನ ಬಗ್ಗೆ ನಿಖರವಾದ ಸುಳಿವು ತಪ್ಪೇ ಆಗಿಲ್ಲವಾದರೂ, ಹರಿದ್ವಾರದ ಕುಂಭಮೇಳಕ್ಕಾಗಿ ತೆರಳಿರುವುದಾಗಿ ಆಶ್ರಮದ ಮೂಲಗಳಿಂದ ತಿಳಿದುಬಂದಿದೆ.
ನಿತ್ಯಾನಂದನ ನಿತ್ಯ ಕಾಮಕ್ರಿಯೆ: ಈ ಮಧ್ಯೆ ಒಂದು ಕಾಲದಲ್ಲಿ ನಿತ್ಯಾನಂದನ ಪರಮಶಿಷ್ಯನಾಗಿದ್ದ ನಿತ್ಯಾ ಧರ್ಮಾನಂದ ಅಲಿಯಾಸ್ ಲೆನಿನ್ ಕರುಪ್ಪನ್ ಪೊಲೀಸರ ಬಳಿ ವಿಡಿಯೋ ಸಿಡಿಗಳನ್ನು ಹಿಡಿದುಕೊಂಡು ಪ್ರತ್ಯಕ್ಷನಾಗಿದ್ದಾನೆ. ನಿತ್ಯಾನಂದ ಹಾಗೂ ರಂಜಿತಾ ಅವರ ಕಾಮದಾಟದ ಅಸಲೀ ವಿಡಿಯೋ ಸುಮಾರು 2 ಗಂಟೆ 30 ನಿಮಿಷ ಕಾಲವಿದ್ದು, ಕಳೆದ ಡಿಸೆಂಬರ್ ನಿಂದ ಸರಸಕ್ರಿಯೆಯ ದೃಶ್ಯ ಮುದ್ರಿಕೆಯನ್ನು ಚಿತ್ರೀಕರಿಸಲಾಗಿದೆ. ನಂತರ ಅದನ್ನು ಸನ್ ಟಿವಿ ಮುಂತಾದ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ತಲುಪಿಸಿದೆ ಪೊಲೀಸರಿಗೆ ಲೆನಿನ್ ಹೇಳಿಕೆ ನೀಡಿದ್ದಾನೆ.
ಕೊಲೆ ಆರೋಪ: ಬಿಡದಿ ಆಶ್ರಮದಲ್ಲಿ ಕೆನಡಾ ಮೂಲದ ಭಕ್ತೆಯೊಬ್ಬರ ಕೊಲೆ ನಡೆದಿರುವುದಾಗಿ ಹೇಳಿದ್ದಾನೆ. ಈ ಕೊಲೆಯಲ್ಲಿ ಸ್ವಾಮೀಜಿ ಸೇರಿದಂತೆ ಇನ್ನೂ ಮೂವರು ಭಾಗಿಯಾಗಿದ್ದರು. ನಿತ್ಯಾನಂದನ ನಿತ್ಯ ಸತ್ಯಗಳನ್ನು ಹೊರಗೆಡವುದರಿಂದ ತನಗೆ ಪ್ರಾಣಾಪಾಯದ ಭಯವಿದೆ. ನನಗೆ ರಕ್ಷಣೆ ನೀಡಿ ಎಂದು ಚೆನ್ನೈ ಪೊಲೀಸ್ ಕಮೀಷನರ್ ಅವರ ಮೊರೆಹೊಕ್ಕಿದ್ದಾನೆ.
ಟಿವಿವಾಹಿನಿಯಿಂದ 50 ಕೋಟಿ ಡಿಮ್ಯಾಂಡ್: 'ನಿತ್ಯಾನಂದ ಸ್ವಾಮಿ ಹರಿದ್ವಾರಕ್ಕೆ ಹೋಗಿದ್ದಾರೆ. ಅಲ್ಲಿ ವಿವಿಧ ದೇಶಗಳಿಂದ ಬಂದಿರುವ 4 ಸಾವಿರಕ್ಕೂ ಅಧಿಕ ಭಕ್ತರೊಡನೆ ಕುಂಭಮೇಳ, ಪವಿತ್ರ ಸ್ನಾನ, ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾ. 18ರ ವೇಳೆಗೆ ಆಶ್ರಮಕ್ಕೆ ಹಿಂದಿರುಗುವ ಸಾಧ್ಯತೆಯಿದೆ' ಎಂದು ಸ್ವಾಮೀಜಿ ಅವರ ವಕೀಲ ಎಂ. ಶ್ರೀಧರ್ ಅವರು ಹೇಳಿದ್ದಾರೆ. ವಿಡಿಯೋ ಚಿತ್ರೀಕರಿಸಿದ್ದು, ಸ್ವಾಮೀಜಿಯ ಮೇಲಿನ ವೈಯಕ್ತಿಕ ದ್ವೇಷದಿಂದ, ಅದು ನಕಲಿ ಹಾಗೂ ಸಂಕಲನಗೊಂಡಿದೆ, ಮಾರ್ಫ್(morph) ತಂತ್ರಜ್ಞಾನ ಬಳಸಿದ್ದಾರೆ. ಸ್ವಾಮೀಜಿ ಹೆಸರು ಕೆಡಿಸಲು ಮಾಡಿದ ವ್ಯವಸ್ಥಿತ ತಂತ್ರವಿದು. ವಿಡಿಯೋ ಮುದ್ರಿಕೆಗಳನ್ನು ಪ್ರಸಾರ ಮಾಡಿದ ಟಿವಿ ವಾಹಿನಿಗಳು 50 ಕೋಟಿ ರು ಡಿಮ್ಯಾಂಡ್ ಮಾಡಿವೆ ಎಂದು ವಕೀಲ ಎಂ ಶ್ರೀಧರ್ ಹೇಳಿದ್ದಾರೆ.