ದಾವಣಗೆರೆಗೆ ರಾಷ್ಟ್ರಪತಿ ಮನ್ನಣೆ
ಕರ್ನಾಟಕದ ಅತ್ಯುತ್ತಮ ಐಪಿಎಸ್ ಅಧಿಕಾರಿಗಳಲ್ಲಿ ದಾವಣಗೆರೆ ಪೂರ್ವ ವಲಯದ ಸತ್ಯನಾರಾಯಣ ರಾವ್ ಈಗ ಪ್ರಮುಖರ ಪಟ್ಟಿಗೆ ಸೇರಿದ್ದಾರೆ. ಮೂಲತಃ ಕೋಲಾರ ಜಿಲ್ಲೆಯವರಾದ ಇವರು ಈವರೆಗಿನ ಸೇವಾವಧಿಯಲ್ಲಿ ಎಲ್ಲೂ ಹೆಸರು ಕೆಡಿಸಿಕೊಂದವರಲ್ಲ. ಬೀದರ್, ಬೆಂಗಳೂರು, ಬೆಳಗಾವಿ ಮುಂತಾದ ಕಡೆ ಎಸ್ಪಿ ಆಗಿ ಕೆಲಸ ಮಾಡಿರುವ ಸತ್ಯನಾರಾಯಣ ಶುದ್ದ ಹಸ್ತರು ಎಂಬ ನಂಬಿಕೆ ಉಳಿಸಿಕೊಂಡಿದ್ದಾರೆ.
ಬೀದರ್ ನಲ್ಲಿ ಥಿಯೇಟರ್ ಗೆ ಬಾಂಬ್ ಬಿದ್ದಾಗ ಅಂದಿನ ಸವಾಲನ್ನು ಸಮರ್ಥವಾಗಿ ನಿಭಾಯಿಸಿದ್ದರು. ಬೆಂಗಳೂರಿನಲ್ಲಿ ಡಿಸಿಪಿ ಆಗಿದ್ದಾಗ ಜಯನಗರದ ದರ್ಗಾ ಗಲಾಟೆಯನ್ನು ತಹಬಂದಿಗೆ ತಂದಿದ್ದರು. ಎರಡು ಜನಾಂಗದ ಮನವೊಲಿಸುವಲ್ಲಿ ಪ್ರಮುಖ ಪಾತ್ರದಾರಿ ಇವರೇ ಆಗಿದ್ದರು. 2003ರಲ್ಲಿ ಮೈಸೂರಿನ ಕರ್ನಾಟಕ ಪೋಲಿಸ್ ಅಕಾಡೆಮಿಯಲ್ಲಿ ಡಿಐಜಿ ಆಗಿದ್ದಾಗ ಮಾಡಿದ ದಕ್ಷ ಕೆಲಸಕ್ಕಾಗಿ ರಾಷ್ಟ್ರಪತಿಗಳಿಂದ ಮೆರಿತೋರಿಯಸ್ ಮೆಡಲ್ ಪಡೆದಿದ್ದರು. ಮಂಗಳೂರಿನಲ್ಲಿದ್ದಾಗ ನಕ್ಷಲರ ಕಾಟವನ್ನು ತಹಬಂದಿಗೆ ತರುವಲ್ಲಿ ಸತ್ಯನಾರಾಯಣ ರಾವ್ ಯಶಸ್ವಿಯಾಗಿದ್ದರು. ದಾವಣಗೆರೆ ಪೂರ್ವ ವಲಯಕ್ಕೆ ಐಜಿ ಯಾಗಿ ಬಂದು ಕುಂತ ಮೇಲೆ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ತಮ್ಮ ಹಿಡಿತ ಸಾಧಿಸಿದವರು. ಬಳ್ಳಾರಿಯಂತಹ ಸೂಕ್ಷ್ಮ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಯನ್ನು ಚುನಾವಣಾ ಸಂದರ್ಭದಲ್ಲಿ ಕಾಪಾಡಿದ್ದು ಇವರ ಹೆಗ್ಗಳಿಕೆ. ಇದೆಲ್ಲದರ ಪ್ರತಿಫಲವೇ ರಾಷ್ಟ್ರಪತಿ ಪದಕ.
ಇನ್ನು ದಾವಣಗೆರೆ ಎಸ್ಪಿ ಸಂದೀಪ್ ಪಾಟೀಲ್ ಅವರಿಗೆ ಕರ್ನಾಟಕದ ಅತ್ಯುನ್ನತ ಎಸಿ ಎಂಬ ಬಿರುದು ಮುಖ್ಯಮಂತ್ರಿಗಳ ಪದಕದಿಂದ ದೊರೆತಿದೆ. ದಾವಣಗೆರೆಯ ಮಾಂಗಲ್ಯ ಕಳ್ಳರು, ಜೇಬುಗಳ್ಳರನ್ನು ಒಟ್ಟು ಮಾಡಿ ಕ್ಯಾಂಪ್ ನೆಪದಲ್ಲಿ ಯೋಗ, ಧ್ಯಾನ, ಪೂಜೆಯಲ್ಲಿ ತೊಡಗಿಸಿ ನೂರು ಹುಡುಗರನ್ನು ಸರಿದಾರಿಗೆ ತರುವಲ್ಲಿ ಯಶಸ್ವಿಯಾದ ಫಾಲವೇ ಸಂದೀಪ್ ಪಾಟಿಲ್ ಅವರಿಗೆ ಮುಖ್ಯಮಂತ್ರಿ ಪದಕ.
ಮಳೆ ನೀರು ಸಂರಕ್ಷಣೆಗೆ ಭಾರಿ ಒತ್ತು ಕೊಟ್ಟ ಜಿಲ್ಲಾಧಿಕಾರಿ ಅಮರ ನಾರಾಯಣ್ ರಾಜ್ಯ ಸರಕಾರದಿಂದ ಪ್ರಶಸ್ತಿ ಪಡೆದು ಪರಿಸರ ಜಾಗೃತಿಗೆ ಕಾರಣಕರ್ತರಾಗಿದ್ದಾರೆ. ಹಾಗೇ ಚಿತ್ರದುರ್ಗದ ಸುಮಾರು ಹತ್ತೊಂಬತ್ತು ಹೊಂಡಗಳನ್ನು ಸ್ವಚ್ಛಗೊಳಿಸಿ ಅಂತರ್ಜಲ ಹೆಚ್ಚಿಸಲು ಮುಂದಾಗಿದ್ದರು. ಕೇಂದ್ರ ನೀರು ಸಂರಕ್ಷಣೆ ಅಧ್ಯಯನ ತಂಡದ ರವೀಂದ್ರ ಪ್ರಸಾದ್ ಸ್ವತಃ ರಾಜ್ಯಕ್ಕೆ ಬಂದು ಇವರ ಕಾರ್ಯದ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು.
ಅಂತೂ ದಾವಣಗೆರೆಗೆ ಈ ಬಾರಿ ಮೂರು ಪ್ರಶಸ್ತಿಗಳ ಗರಿಗೆದರಿಕೊಂಡಿದೆ. ಜಿಲ್ಲೆಯ ಮೂವರು ಉನ್ನತ ಅಧಿಕಾರಿಗಳಿಗೆ ಪ್ರಶಸ್ತಿ ಬಂದಿರುವುದು ಸಂತೋಷದ ವಿಚಾರವೇ .
(ಕಾಂತರಾಜ್ ಅರಸ್, ಹಾಯ್ ಬೆಂಗಳೂರ್)