ನಾನು ನಿರಪರಾಧಿ, ಸ್ವಾಮಿ ನಿತ್ಯಾನಂದಸ್ವಾಮಿ
ಚೆನ್ನೈ ಮೂಲದ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ನಿತ್ಯಾನಂದನ ರಾಸಲೀಲೆ ಚಿತ್ರೀಕರಣ ಹೊಂದಿರುವ ವರದಿಯೊಂದು ಬಿತ್ತರಗೊಳ್ಳುತ್ತಿದ್ದಂತೆಯೇ ತಕ್ಷಣ ಎಚ್ಚತ್ತುಕೊಂಡ ಕಳಂಕಿತ ಸ್ವಾಮಿ, ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿರುವ ವರದಿಯನ್ನು ನಿಲ್ಲಿಸಲು ಆದೇಶ ನೀಡಬೇಕೆಂದು ನ್ಯಾಯಾಲಯದ ಮೊರ ಹೊಕ್ಕ. ಆದರೆ, ನ್ಯಾಯಾಲಯ ಸ್ವಾಮಿಯ ಅರ್ಜಿ ವಿಚಾರಣೆಯನ್ನು ಮುಂದೂಡಿದ್ದು, ಮಾರ್ಚ್ 8ಕ್ಕೆ ವಿಚಾರಣೆ ನಡೆಸುವುದಾಗಿ ಹೇಳಿದೆ. ಇದಕ್ಕೂ ಮುಂಚೆ ಸ್ವಾಮಿ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ವರದಿಯನ್ನು ನಿಲ್ಲಿಸಲು ಸರ್ವಪ್ರಯತ್ನ ನಡೆಸಿ ಕೊನೆಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ.
ಈ ಮಧ್ಯೆ, ನಿತ್ಯಾನಂದ ಕಾಮಕಾಂಡ ಬಯಲಾಗುತ್ತಿದ್ದಂತೆಯೇ ತಮಿಳುನಾಡಿನಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಯಿತು. ಚೆನ್ನೈ ಬಾರ್ ಅಸೋಸಿಯೇಷನ್ ಅನೇಕ ವಕೀಲರು ನಿತ್ಯಾನಂದನ ವಿರುದ್ಧ ದೂರು ದಾಖಲಿಸಿದ್ದು, ಕೂಡಲೇ ಕಾಮಾಂಧ ಸ್ವಾಮಿಯನ್ನು ಬಂಧಿಸಬೇಕು ಹಾಗೂ ಆತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.
ತಿರುಚ್ಚಿಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಘಟನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿತ್ಯಾನಂದನ ಕೃತ್ಯ ಇಡೀ ಸಮಾಜ ತಲೆ ತಗ್ಗಿಸುವ ಕೆಲಸವಾಗಿದೆ. ಈ ಬಗ್ಗೆ ಕೂಡಲೇ ಸರಕಾರ ಉನ್ನತ ಮಟ್ಟದ ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ. ಸ್ವಾಮಿ ಗಳಿಸಿರುವ ಅಕ್ರಮ ಆಸ್ತಿಯ ಮುಟ್ಟುಗೋಲಿನ ಬಗ್ಗೆ ಮುಜರಾಯಿ ಖಾತೆ ಹಿರಿಯ ಅಧಿಕಾರಿ, ಹಿಂದೂ ಸಮಾಜದ ಮುಖಂಡರೊಂದಿಗೆ ಚರ್ಚಿಸಿದ ಬಳಿದ ಮುಂದಿನ ಕ್ರಮ ಕೈಗೊಳ್ಳಲಾಗುವುದು ಕರುಣಾನಿಧಿ ಸ್ಪಷ್ಟಪಡಿಸಿದ್ದಾರೆ.