ಹೋಳಿ ಹಬ್ಬದಂದು ಶಿವಮೊಗ್ಗದಲ್ಲಿ ರಕ್ತದೋಕುಳಿ
ಮಾರ್ಚ್ 7ರಂದು ನಗರದಲ್ಲಿ ಬೃಹತ್ ಹಿಂದೂ ಸಮಾವೇಶ ನಡೆಯುತ್ತಿದೆ. ಅದರಲ್ಲಿ ಭಾಗವಹಿಸಲು ಪ್ರವೀಣ್ ತೋಗಾಡಿಯಾ ಬರುತ್ತಿದ್ದಾರೆ. ಆ ಸಮಾವೇಶಕ್ಕೆ ಕಲ್ಲು ಹಾಕಲು ಹೊರಗಿನಿಂದ ಬಂದಿರುವ ಜನ, ಕನ್ನಡಪ್ರಭದಲ್ಲಿ ಪೈಗಂಬರ್ ವಿರುದ್ಧವಾಗಿ ಬಂದಿರುವ ಲೇಖನವನ್ನೇ ನೆಪವಾಗಿಟ್ಟುಕೊಂಡು ಕೋಮುಗಲಭೆ ಎಬ್ಬಿಸಿದೆ. ಇದರ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಹಿಂದೂ ಸಂಘಟನೆ ಆರೋಪಿಸಿದೆ.
ಪರಿಸ್ಥಿತಿ ಒಂದು ಪ್ರದೇಶದಲ್ಲಿ ನಿಯಂತ್ರಣಕ್ಕೆ ಬರುತ್ತಿದ್ದಂತೆ ಮತ್ತೊಂದು ಪ್ರದೇಶದಲ್ಲಿ ಗಲಭೆಗಳಾಗುತ್ತಿವೆ. ಕಂಡಕಂಡಲ್ಲೆಲ್ಲ ಹಿಂಸಾಚಾರಕ್ಕಿಳಿದಿರುವ ಸಾವಿರಾರು ಸಂಖ್ಯೆಯಲ್ಲಿನ ಜನರನ್ನು ಹತ್ತಿಕ್ಕುವಲ್ಲಿ ನೂರಾರು ಸಂಖ್ಯೆಯಲ್ಲಿದ್ದ ಪೊಲೀಸರು ಹೆಣಗಾಡುತ್ತಿದ್ದಾರೆ. ಶಾಂತಿಯನ್ನು ಕದಡಲೆಂದು ಬೇಕಂತಲೇ ಒಂದು ಕೋಮಿನವರು ಸಾವಿರಾರು ಸಂಖ್ಯೆಯಲ್ಲಿ ಕಿಡಿಗೇಡಿಗಳನ್ನು ಕರೆತಂದಿದ್ದಾರೆ ಎನ್ನಲಾಗಿದೆ.
ಇಬ್ಬರು ಬಲಿ : ಪರಿಸ್ಥಿತಿ ಕೈಮೀರಿದ್ದರಿಂದ ಪೊಲೀಸರು ನಡೆಸಿದ ಗೋಲಿಬಾರಿನಲ್ಲಿ ಇಬ್ಬರು ಬಲಿಯಾಗಿದ್ದಾರೆ, ನಾಲ್ವರು ಗಾಯಗೊಂಡಿದ್ದಾರೆ. ಗಲಭೆಯಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವಾಹನಗಳು ಭಸ್ಮವಾಗಿವೆ. ಹಿಂದೂ ಮತ್ತು ಮುಸ್ಲಿಂ ಕೋಮಿಗೆ ಸೇರಿದ ಅನೇಕ ಅಂಗಡಿಗಳಿಗೆ, ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಎಂಪಿಕೆ ರಸ್ತೆ, ಗಾಂಧಿ ಬಜಾರ್, ಲಷ್ಕರ್ ಮೊಹಲ್ಲಾ, ನೆಹರೂ ಪಾರ್ಕ್ ಪ್ರದೇಶಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಪತ್ರಕರ್ತರ ಮೇಲೆ ಹಲ್ಲೆ : ಗಲಭೆಯ ವರದಿ ಮಾಡುತ್ತಿದ್ದ ವಿವಿಧ ಪತ್ರಿಕೆಗಳ ವರದಿಗಾರ ಮೇಲೆ ಮತ್ತು ಛಾಯಾಪತ್ರಕರ್ತರ ಮೇಲೆ ಕೂಡ ಹಲ್ಲೆ ಮಾಡಲಾಗಿದೆ. ಸುವರ್ಣ ಚಾನಲ್ಲಿನ ರಾಜೇಶ್ ಕಾಮತ್, ವಿಜಯ ಕರ್ನಾಟಕದ ಲಿಂಗನಗೌಡ ಮತ್ತು ಸಂಜೆವಾಣಿಯ ರೇಣುಕೇಶ್ ಅವರ ಮೇಲೆ ಪ್ರತಿಭಟನಾಕಾರರು ದೊಣ್ಣೆಗಳಿಂದ ದಾಳಿ ನಡೆಸಿದ್ದರಿಂದ ಅವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಜೇಶ್ ಕಾಮತ್ ಅವರ ತಲೆಗೆ ತೀವ್ರವಾಗಿ ಪೆಟ್ಟುಬಿದ್ದಿದೆ.
ಗಾಳಿ ಸುದ್ದಿ : ಗಲಭೆಯ ಸುದ್ದಿ ಊರಲ್ಲೆಲ್ಲ ಹಬ್ಬತ್ತಿದ್ದಂತೆ ಮಕ್ಕಳನ್ನು ಶಾಲೆಗೆ ಕಳುಹಿಸಿದ ಪಾಲಕರು ಕೂಡ ಚಿಂತಾಕ್ರಾಂತರಾಗಿದ್ದರು. ಕೆಲ ಹಿಂದೂ ಶಾಲಾ ಬಾಲಕಿಯರನ್ನು ಅಪಹರಿಸಲಾಗಿದೆ ಎಂಬ ಗಾಳಿ ಸುದ್ದಿಯೂ ಹಬ್ಬಿದೆ. ಆದರೆ, ಈ ಗಾಳಿ ಸುದ್ದಿಗಳಿಗೆ ಕಿವಿಗೊಡಬಾರದು, ಪಾಲಕರು ಮಕ್ಕಳ ಬಗ್ಗೆ ಅನಗತ್ಯವಾಗಿ ಚಿಂತಿಸಬಾರದೆಂದು ಜಿಲ್ಲಾ ಪೊಲೀಸ್ ಆಡಳಿತ ಮನವಿ ಮಾಡಿದೆ.
ಶಾಲಾ-ಕಾಲೇಜಿ ರಜಾ : ನಗರದಾದ್ಯಂತ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಎಲ್ಲೆಡೆ ಅಂಗಡಿಗಳನ್ನು ಮುಚ್ಚಲಾಗಿದೆ. ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿದೆ. ತೀವ್ರ ಆತಂಕಕ್ಕೊಳಗಾಗಿರುವ ಜನತೆ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಮಂಗಳವಾರ, ಮಾ.2ರಂದು ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಪಂಕಜ್ ಕುಮಾರ್ ಪಾಂಡೆ ಆದೇಶ ಹೊರಡಿಸಿದ್ದಾರೆ.
ಹಾಸನ ಧಗಧಗ : ಅವಹೇಳನಕಾರಿ ಎಂಬು ಬಿಂಬಿಸಲಾಗಿರುವ ವರದಿ ಹಾಸನ ಮತ್ತು ದಾವಣಗೆರೆಯಲ್ಲಿಯೂ ಪ್ರತಿಭಟನೆಗೆ ಮತ್ತು ಹಿಂಸಾಚಾರಕ್ಕೆ ಕಾರಣವಾಗಿದೆ. ನಗರದಲ್ಲಿ ಅನೇಕ ವಾಹನಗಳಿಗೆ ಬೆಂಕಿ ಇಡಲಾಗಿದೆ. ಅಂಗಡಿ ಮುಂಗಟ್ಟುಗಳು ಕೂಡ ಕೋಮು ಕೆನ್ನಾಲಗೆಯಲ್ಲಿ ಬೂದಿಯಾಗಿವೆ. ಎರಡು ನಗರಗಳಲ್ಲಿಯೂ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಮಾಡಲಾಗಿದೆ.
ಯಡಿಯೂರಪ್ಪ ಮನವಿ : ಯಾವುದೇ ಕೋಮಿನ ಭಾವನೆಗಳಿಗೆ ಧಕ್ಕೆ ತರುವಂಥ ಲೇಖನಗಳು ಬಂದರೆ ಅವರು ಸಿಡಿದೇಳುವುದು ಸಹಜ. ಆದರೆ, ಜನ ಸಂಯಮದಿಂದ ವರ್ತಿಸಬೇಕು. ಯಾವುದೇ ಆಸ್ತಿಪಾಸ್ತಿಗೆ ಹಾನಿ ಮಾಡಬಾರದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಇಂಥದೇ ಮತ್ತೊಂದು ಘಟನೆ : 1986ನೇ ಇಸ್ವಿಯಲ್ಲಿ ಕರ್ನಾಟಕದಲ್ಲಿ ಇದೇ ಬಗೆಯ ಒಂದು ಘಟನೆ ಸಂಭವಿಸಿತ್ತು. ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಸಾಪ್ತಾಹಿಕ ವಿಭಾಗದಲ್ಲಿ ಪ್ರಕಟವಾದ ಒಂದು ಕಥೆಗೆ ಪತ್ರಿಕೆ ಕೊಟ್ಟಿದ್ದ ಶೀರ್ಷಿಕೆ ಕೋಲಾಹಲಕ್ಕೆ ಕಾರಣವಾಗಿತ್ತು. ಪತ್ರಿಕೆಯ ಶೀರ್ಷಿಕೆಯನ್ನು ತಪ್ಪಾಗಿ ಭಾವಿಸಿದ ಮುಸ್ಲಿಂ ಜನತೆ ರೊಚ್ಚಿಗೆದ್ದು ಗಲಭೆ ಉಂಟುಮಾಡಿದ್ದರು. ಪತ್ರಿಕೆಯ ನ್ಯೂಸ್ ಪ್ರಿಂಟ್ ಗೋದಾಮಿಗೆ ನುಗ್ಗಿ ಬೆಂಕಿ ಹಚ್ಚಲು ಪ್ರಯತ್ನಿಸಿದ ಗಲಭೆಕೋರರನ್ನು ಚದುರಿಸಲು ಪೊಲೀಸರು ಗುಂಡು ಹಾರಿಸಿದ್ದರು. ಈ ಗುಂಡಿಗೆ ನಾಲ್ಕು ಜನ ಬಲಿಯಾಗಿದ್ದರು. ಕೆಲಕಾಲ ಪತ್ರಿಕೆ ಪ್ರಕಟಣೆಯನ್ನು ನಿಲ್ಲಿಸಿತ್ತು.