ಹಿಂಬಾಗಿಲಿನಿಂದ ಬಿಟಿ ಬದನೆ ಪ್ರವೇಶ
ಆದರೆ, ನಿಜಕ್ಕೂ ಬಿಟಿ ತಳಿಗಳನ್ನು ನಿಷೇಧಿಸಲಾಗುವುದೇ ಅಥವಾ ಭಾರತದಲ್ಲಿ ಅದಕ್ಕೆ ತಳ ಊರಲು ಅವಕಾಶ ನೀಡುವ ಹುನ್ನಾರ ತೆರೆ ಮರೆಯಲ್ಲಿ ನಡೆಯುತ್ತಿದೆಯೇ? ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಪೃಥ್ವಿರಾಜ್ ಚವ್ಹಾಣ್ ಅವರ ಚಲನವಲನಗಳನ್ನು ಗಂಭೀರವಾಗಿ ಗಮನಿಸುತ್ತಿರುವವರ ಪ್ರಕಾರ ಮೇಲಿನ ಪ್ರಶ್ನೆಗೆ ಉತ್ತರ, ಹೌದು!
ಬಿಟಿ ಬದನೆ ವಿಚಾರದಲ್ಲಿ ಚಾಲ್ತಿಯಿರುವ ಅದಕ್ಕೆ ಅನಾನುಕೂಲವಾಗಿರುವ ನಿಯಮಾವಳಿಗಳನ್ನು ತಿರುಚಲು ಸಚಿವರು ಗುಪ್ತವಾಗಿ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಷ್ಟೇ ಅಲ್ಲ, ಹಿಂಬಾಗಿಲಿನಿಂದ ಬಿಟಿ ಬದನೆಯನ್ನು ಬಚಾವ್ ಮಾಡುವ ಚವ್ಹಾಣ್ ಅವರ "ಕುಯುಕ್ತಿಯ" ವಿರುದ್ಧ ಸಹಿಸಂಗ್ರಹ ಚಳವಳಿ ಇದೀಗ ಆರಂಭವಾಗಿದೆ.
ಮಾನ್ ಸಾಂಟೋ ಮತ್ತಿತರ ಬಯೋಟೆಕ್ ಕಂಪನಿಗಳು ಕೊಡಮಾಡುವ ಹಣದಿಂದ ನಡೆಸಲಾದ ಅಧ್ಯಯನದ ಅಂಶಗಳನ್ನು ಸಚಿವರು ಮಕ್ಕಿಕಾಮಕ್ಕಿ ಕಾಪಿ ಹೊಡೆದು ಬಿಟಿ ಬದನೆ ಪರವಾಗಿ ವಕಾಲತ್ತು ವಹಿಸಿ ಬಿಟಿ ಬದನೆಗೆ ದೀರ್ಘಾಯಸ್ಸು ಕೋರುತ್ತಿದ್ದಾರೆ ಎಂದು ಹೇಳಲಾಗಿದೆ.
ಜೆನಿಟಿಕಲಿ ಮಾಡಿಫೈಡ್ ಉತ್ಪನ್ನಗಳಾದ ಬದನೆ, ಅಕ್ಕಿ ಮುಂತಾದ ಆಹಾರ ಪದಾರ್ಥಗಳನ್ನು ಬಳಸುವುದಕ್ಕೆ ಅಡ್ಡಿಯಾಗುವ ಕಾನೂನು ಅಂಶಗಳನ್ನು ತಿದ್ದುವುದಲ್ಲದೆ, ಆ ಬಗ್ಗೆ ಮಸೂದೆ ತರುವುದಕ್ಕೆ ಸಚಿವರು ತೀವ್ರ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಸಾರ್ವಜನಿಕರ ಅಭಿಪ್ರಾಯಗಳನ್ನು ಕ್ರೋಢೀಕರಿಸದೆ ಮಸೂದೆ ತರಲು ಯತ್ನಿಸುತ್ತಿರುವ ಸಚಿವರ ಉಮೇದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ ಎಂದು ಸಹಿ ಸಂಗ್ರಹ ನಡೆಸುತ್ತಿರುವ ಗುಂಪು ಆರೋಪಿಸಿದೆ.
ಚವ್ಹಾಣ್ ಅವರು ಭಾರತದ ಜನಸೇವಕ ಆಗಿರಬೇಕೇ ಹೊರತು ಬಯೋಟೆಕ್ ಬೀಜ ಉತ್ಪಾದನಾ ಸಂಸ್ಥೆಗಳ ಬಾಲಬಡುಕನಾಗಬಾರದು ಎಂದು ಬಿಟಿ ಆಹಾರ ಮತ್ತು ಅದನ್ನು ಬೆಂಬಲಿಸುತ್ತಿರುವ ಸಚಿವರ ವಿರೋಧಿಗಳು ಒತ್ತಾಯಿಸುತ್ತಿದ್ದಾರೆ. ಸಹಿ ಮಾಡುವುದಕ್ಕೆ ಗ್ರೀನ್ ಪೀಸ್ ಆನ್ ಲೈನ್ ಅರ್ಜಿ ನಮೂನೆಗಳು ನಿಮಗೆ ಇಲ್ಲಿ ಸಿಗುತ್ತವೆ.