ಬಿಜೆಪಿ ನಾಯಕರ ಮೇಲೆ ಕಲ್ಲು ಎಸೆತ
ಬಿಜೆಪಿ ವತಿಯಿಂದ ಲಖನೌದಲ್ಲಿ ನಡೆದ ಮಹಾರ್ಯಾಲಿಯಲ್ಲಿ ಗಾಝಿಯಾಬಾದ್ ಸಂಸದ ರಾಜ್ನಾಥ್ ಸಿಂಗ್, ಅವರ ಪುತ್ರಹಾಗೂ ಮುಖ್ತಾರ್ ಅಬ್ಬಾಸ್ ನಕ್ವಿ, ವಿನಯ್ ಕಟಿಯಾರ್ ಸೇರಿದಂತೆ ಪ್ರಮಖ ನಾಯಕರು ಹಾಜರಿದ್ದರು. ಬೃಹತ್ ರ್ಯಾಲಿ ಉದ್ದೇಶಿಸಿ ನಾಯಕರು ಮಾತನಾಡಿ ಬಳಿಕ ಅಸೆಂಬ್ಲಿ ಮುತ್ತಿಗೆಗೆ ಯತ್ನಿಸಿದರು. ಆದರೆ ಇದನ್ನು ಪೊಲೀಸರು ತಡೆಯಲು ಮುಂದಾದಾಗ ಹಿಂಸಾಚಾರ ಸಂಭವಿಸಿದೆ. ಇದರಿಂದ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ಪ್ರತಿಭಟನೆ ಹತ್ತಿಕ್ಕಲು ಯತ್ನಿಸಿದ ಹಿನ್ನೆಲೆಯಲ್ಲಿ, ಆಕ್ರೋಶಗೊಂಡ ಕಾರ್ಯಕರ್ತರು ಪೊಲೀಸರತ್ತ ಕಲ್ಲುತೂರಾಟ ನಡೆಸಿದರು.ಪರಿಸ್ಥಿತಿ ನಿಯಂತ್ರಣಕ್ಕೆ ತರಲು, ಪ್ರಮುಖ ನಾಯಕರು ಮಾಡಿದ ಮನವಿಗೆ ಸ್ಪಂದನೆ ದೊರೆಯಲಿಲ್ಲ, ಆಗ ಪೊಲೀಸರು ಲಾಠಿಚಾರ್ಜ್ ಹಾಗೂ ಅಶ್ರುವಾಯು ಸಿಡಿಸಿದರು. ಈ ಸಂದರ್ಭದಲ್ಲಿ ರಾಜ್ನಾಥ್ ಸಿಂಗ್ ಹಾಗೂ ಅವರ ಪುತ್ರ ಮತ್ತು ಮುಖ್ತಾರ್ ಅಬ್ಬಾಸ್ ನಕ್ವಿಗೆ ಗಾಯಗಳಾಗಿವೆ.
ಪೊಲೀಸರ ಲಾಠಿಚಾರ್ಜ್ನಿಂದಾಗಿ ನೂರಕ್ಕೂ ಅಧಿಕ ಮಂದಿ ಪಕ್ಷದ ಕಾರ್ಯಕರ್ತರು ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ ಎಂದು ಬಿಜೆಪಿ ನಾಯಕ ವಿನಯ್ ಕಟಿಯಾರ್ ತಿಳಿಸಿದ್ದಾರೆ. ಕಾರ್ಯಕರ್ತರ ವಿಚಾರದಲ್ಲಿ ಮೃಗೀಯ ವರ್ತನೆ ಪ್ರದರ್ಶಿಸಿರುವ ಪೊಲೀಸರ ಕ್ರಮವನ್ನು ಅವರು ತೀಕ್ಷ್ಣವಾಗಿ ಖಂಡಿಸಿದ್ದಾರೆ.