ಹಾಕಿ ಉಳಿಸಲು ರಾಹುಲ್ ಗಾಂಧಿಗೆ ಮಾತ್ರ ಸಾಧ್ಯ
ಅಭ್ಯಾಸ ಪಂದ್ಯ ಹಾಗೂ ತರಬೇತಿ ಶಿಬಿರದ ಚಿತ್ರಣ ಮಾಡಲು ಅನುವು ಮಾಡಿಕೊಡದ ವೃತ್ತಿಪರತೆ ಇಲ್ಲದ ಇಂಟರ್ ನ್ಯಾಷನಲ್ ಹಾಕಿ ಫೆಡರೇಷನ್ ಅಧಿಕಾರಿಗಳ ವಿರುದ್ಧ ಹರಿಹಾಯ್ದಿರುವ ಪತ್ರಕರ್ತರು, ವಿಶ್ವಕಪ್ ಹಾಕಿ ಸುದ್ದಿ ಪ್ರಸಾರ ಹಾಗೂ ಪ್ರಚಾರಕ್ಕೆ ಕಡಿವಾಣ ಹಾಕಲು ನಿರ್ಧರಿಸಿದ್ದಾರೆ.
ಆದರೆ, ಮಾಧ್ಯಮಗಳ ಕೋಪದ ಕಾರಣ ತಿಳಿದ ಇಂಟರ್ ನ್ಯಾಷನಲ್ ಹಾಕಿ ಫೆಡರೇಷನ್ ನ ಸಂವಹನ ವ್ಯವಸ್ಥಾಪಕ ಅರ್ಜೈನ್ ಮೈಜರ್ ಎಲ್ಲವನ್ನು ಸರಿ ಮಾಡುವ ಪ್ರಯತ್ನದಲ್ಲಿದ್ದಾರೆ. ಸ್ವತಃ ಪತ್ರಕರ್ತರಾಗಿದ್ದ ಮೈಜರ್ ಇದ್ದು ಕೂಡ ಈ ರೀತಿಯ ಗೊಂದಲ ಉಂಟಾಗಿರುವುದಕ್ಕೆ ಪತ್ರಕರ್ತರು ಬೇಸರ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ಫೆ.28ರಿಂದ ಮಾ.13ರ ವರೆಗೆ ವಿಶ್ವದ ಹನ್ನೆರಡು ದೇಶಗಳು ಹಾಕಿ ವಿಶ್ವಕಪ್ ಸೆಣಸಿನಲ್ಲಿ ಪಾಲ್ಗೊಳ್ಳಲಿವೆ. ಸುನೀಲ್ ಶೆಟ್ಟಿ, ಸನ್ನಿ ಡಿಯೋಲ್ ಸೋದರರು, ಪ್ರಿಯಾಂಕ ಚೋಪ್ರಾ ಸೇರಿದಂತೆ ಹಲವಾರು ನಟ, ನಟಿಯರು ವಿಶ್ವಕಪ್ ಹಾಕಿಯ ಪ್ರಚಾರದಲ್ಲಿ ನಿರತರಾಗಿದ್ದಾರೆ. ಮುಳುಗುತ್ತಿರುವ ಹಾಕಿ ಪ್ರಭೆಯನ್ನು ಮತ್ತೆ ಬೆಳಗಲು ಪ್ರಭಾವಿ ಯುವ ನೇತಾರ ರಾಹುಲ್ ಗಾಂಧಿ ಮುಂದೆ ಬರಬೇಕು, ಅವರಿಗೊಬ್ಬರಿಗೆ ಮಾತ್ರ ಭಾರತದ ರಾಷ್ಟ್ರೀಯ ಕ್ರೀಡೆಯನ್ನು ಉಳಿಸಲು ಸಾಧ್ಯ . ಭಾರತದಲ್ಲಿ ಹಾಕಿ ಗತವೈಭವ ಮತ್ತೆ ಮರುಕಳಿಸಬೇಕು ಎಂದು ಸುನೀಲ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.