ಕಾರ್ಲ್ಟನ್ ಕಟ್ಟಡದ ಮಾಲಿಕನ ವಿರುದ್ಧ ಮೊಕದ್ದಮೆ
ಮಂಗಳವಾರ, ಫೆಬ್ರವರಿ 23ರಂದು ಸಂಭವಿಸಿದ ಅಗ್ನಿ ದುರಂತದಲ್ಲಿ ಕಟ್ಟಡದಿಂದ ಸುಲಭವಾಗಿ ಹೊರಬರಲಾರದೆ ಮೂವರು ಮೇಲಿನಿಂದ ಜಿಗಿದು ಮತ್ತು ಆರು ಜನ ದಟ್ಟ ಹೊಗೆಯಿಂದ ಉಸಿರುಗಟ್ಟಿ ಮೃತರಾಗಿದ್ದಾರೆ. ಮಣಿಪಾಲ್ ಆಸ್ಪತ್ರೆಯಲ್ಲಿ ಇನ್ನೂ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ತುರ್ತುಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆ ಮತ್ತು ಕಟ್ಟಡ ನಿರ್ಮಾಣದಲ್ಲಿ ಮಾಲಿಕರು ನಿಯಮ ಉಲ್ಲಂಘಿಸಿದ್ದಾರೆಂಬ ಆರೋಪದ ಮೇಲೆ ತನಿಖೆ ನಡೆಸಬೇಕೆಂದು ಸರಕಾರ ಆದೇಶಿಸಿದೆ ಮತ್ತು ನಗರದಾದ್ಯಂತ ಇರುವ ಎಲ್ಲ ಬಹುಮಹಡಿ ಕಟ್ಟಡಗಳಲ್ಲಿ ರಕ್ಷಣಾ ವ್ಯವಸ್ಥೆಯನ್ನು ವೀಕ್ಷಿಸಬೇಕೆಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹೇಳಿದೆ.
ಹಳೆ ಏರ್ಪೋರ್ಟ್ ರಸ್ತೆಯಲ್ಲಿ ದೊಮ್ಮಲೂರು ವೃತ್ತದಲ್ಲಿರುವ ಕಾರ್ಲ್ಟನ್ ಕಟ್ಟಡಕ್ಕೆ ಅಗ್ನಿಶಾಮಕ ದಳ ಬೀಗ ಜಡಿದಿದೆ. ಏಳು ಮಹಡಿಯ ಕಟ್ಟಡದಲ್ಲಿ ಬೆಂಕಿ ನಂದಿಸು ವ್ಯವಸ್ಥೆ ಸರಿಯಾಗಿತ್ತೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಅಗ್ನಿಶಾಮಕ ದಳದ ಹಿರಿಯ ಅಧಿಕಾರಿ ಹೇಳಿದ್ದಾರೆ.
ಬೆಂಕಿ ಅನಾಹುತ ಸಂಭವಿಸುತ್ತಿದ್ದಂತೆ ಜನ ಎಲ್ಲೆಲ್ಲೂ ನೆರೆದಿದ್ದರಿಂದ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬೇಗನೆ ಆಗಮಿಸುವುದು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಹಲವರು ಜೀವ ಕಳೆದುಕೊಳ್ಳಬೇಕಾಯಿತು. ಆದರೆ, ಇಂದು ಕೂಡ ದಾರಿಹೋಕರಿಗೆ ಈ ಕಟ್ಟಡ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಬೆಳಗಿನ ಜಾವ ವಾಹನಗಳನ್ನು ನಿಲ್ಲಿಸಿ 9 ಜನರನ್ನು ಬಲಿ ತೆಗೆದುಕೊಂಡ ಕಟ್ಟಡವನ್ನು ಮೇಲ್ಸೇತುವೆ ಮೇಲೆ ನಿಂತು ನೋಡುತ್ತಿದ್ದುದು ಕಂಡುಬಂದಿತು. ಇದರಿಂದಾಗಿ ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು.
ವಿಡಿಯೋ : ಕಾರ್ಲ್ಟನ್ ಟವರ್ಸ್ ನಲ್ಲಿ ಅಗ್ನಿ ದುರಂತ