ಚಡ್ಡಿಗಳ ಕಚೇರಿ ಉದ್ಘಾಟಿಸಿದ ಲುಂಗಿ
ಫೆ. 24ರಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕೊಲ್ಲಂಗೆ ಆಗಮಿಸುತ್ತಿದ್ದಾರೆ. ಸುಮಾರು ಒಂದು ಲಕ್ಷ ಸ್ವಯಂಸೇವಕರು ಪಾಲ್ಗೊಳ್ಳುವ ಸಭೆಯಲ್ಲಿ ಅವರು ಮಾತನಾಡುವ ಕಾರ್ಯಕ್ರಮವಿದೆ. ಈ ಹಿನ್ನೆಲೆಯಲ್ಲಿ ಸಂಘ ಪರಿವಾರ ಕಾರ್ಯಕ್ರಮ ವ್ಯವಸ್ಥೆ ಮಾಡುವುದಕ್ಕೆ ಒಂದು ಪ್ರತ್ಯೇಕ ಕಚೇರಿ ತೆರೆದಿದೆ. ಆ ಕಚೇರಿಯನ್ನು ಪಾಲಿಕೆಯ ಮಹಾಪೌರರೂ ಆಗಿರುವ ಪದ್ಮಲೋಚನಂದನ್ ತಮ್ಮ ಅಮೃತ ಹಸ್ತದಿಂದ ಉದ್ಘಾಟಿಸಿ ಪೀಕಲಾಟಕ್ಕೆ ಸಿಲುಕಿಕೊಂಡಿದ್ದಾರೆ.
ತಮ್ಮ ಪಕ್ಷದ ಸಿದ್ಧಾಂತಗಳಿಗೂ ಹಾಗೂ ಆರ್ಎಸ್ಎಸ್ ಸಂಘಟನೆಯ ಸಿದ್ದಾಂತಗಳಿಗೂ ಅಜಗಜಾಂತರ ವ್ಯತ್ಯಾಸವಿದ್ದರೂ ಕಚೇರಿ ಉದ್ಘಾಟಿಸಿದ ಪದ್ಮ, ಇದೀಗ ತಮ್ಮ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆರ್ಎಸ್ಎಸ್ ಕಚೇರಿ ಉದ್ಘಾಟನೆಯಲ್ಲಿ ಪದ್ಮಲೋಚನ್ ಭಾಗವಹಿಸಿದ್ದು ತಪ್ಪು ಮತ್ತು ಅವರು ಅದಕ್ಕಾಗಿ ಪಕ್ಷದ ಅನುಮತಿಯನ್ನು ಪಡೆದಿರಲಿಲ್ಲ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಜಗೋಪಾಲ್ ಹೇಳಿಕೆ ನೀಡಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಅವರು ರಾಜ್ಯದ ಸಿಪಿಎಂ ಮುಖಂಡರಿಗೆ ವರದಿ ಸಲ್ಲಿಸಿದ್ದಾರೆ.
ಘಟನೆ ಬಗ್ಗೆ ಆರ್ಎಸ್ಎಸ್ ಮುಖಂಡರು ಪ್ರತಿಕ್ರಿಯಿಸುತ್ತಾ, ನಗರದಲ್ಲಿ ನಡೆಯುವ ದೊಡ್ಡ ಕಾರ್ಯಕ್ರಮಕ್ಕೆ ಮೇಯರ್ ಅವರನ್ನು ಆಮಂತ್ರಿಸುವುದು ಸಹಜ. ಈ ವಿಷಯದಲ್ಲಿ ಅನಾವಶ್ಯಕವಾಗಿ ರಾಜಕೀಯ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.