ಸಮ್ಮೇಳನದಲ್ಲಿ ತೆಗೆದುಕೊಂಡಿದ್ದು ಒಂದು ಸಾಲಿನ ನಿರ್ಣಯ!
ಆದರೆ, ಈ ಸಂದರ್ಭದಲ್ಲಿ ಮುಂಡರಗಿ ತಾಲ್ಲೂಕಿನ ಮಾಜಿ ಶಾಸಕ ಎಸ್ ಎಸ್ ಪಾಟೀಲ್, ಗದಗಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಸಾರ್ಥಕತೆ ಕಾಣಬೇಕಾದರೆ, ಈ ಭಾಗದಲ್ಲಿ ಆಗಿರುವ ನೆರೆ ಸಂತ್ರಸ್ಥರಿಗೆ ಸೂಕ್ತ ಹಾಗೂ ಶಾಶ್ವತ ಪರಿಹಾರ ನೀಡಬೇಕು ಎಂಬ ತೆಗೆದುಕೊಳ್ಳುವುದು ಅತ್ಯಂತ ಸೂಕ್ತ ಎಂದು ಅವರು ವಾದಿಸಿದರು. ಒಂದು ಸಾಲಿನ ನಿರ್ಣಯದ ಜೊತೆಗೆ ಪಾಟೀಲ್ ಅವರ ಮನವಿಯಂತೆ ಎರಡನೇ ನಿರ್ಣಯವಾಗಿ ನೆರೆ ಸಂತ್ರಸ್ಥರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂಬ ನಿರ್ಣಯವನ್ನು ಕೈಗೊಳ್ಳಲಾಯಿತು.
ಗದಗಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಗದಗಿಗೆ ಆಗಮಿಸಿದ ಗೀತಾ ನಾಗಭೂಷಣ ಅವರು ತವರಿಗೆ ಬಂದಿರುವ ಸಂಭ್ರಮವನ್ನು ಹಂಚಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಸಮ್ಮೇಳನದ ಸ್ವಾಗತ ಸಮಿತಿ ಇದೇ ಮೊದಲ ಬಾರಿಗೆ ಬೃಹತ್ ಮೊತ್ತ ನೀಡುವ ಮೂಲಕ ಹೊಸ ನಾಂದಿಯನ್ನು ಹಾಡಿತು. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಗದಗ ಶಾಸಕ ಶ್ರೀಶೈಲಪ್ಪ ಬಿದರೂರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರು ಗೀತಾ ನಾಗಭೂಷಣ ಅವರಿಗೆ 11,11,1111 ರುಪಾಯಿಗಳನ್ನು ನೀಡಿ ಗೌರವಿಸಿದರು. ಮೊದಲ ಬಾರಿಗೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಿಗೆ ಭಾರಿ ಮೊತ್ತ ನೀಡಿದ ಸಾಹಿತ್ಯ ಸಮ್ಮೇಳನ ಎಂಬ ಹೆಗ್ಗಳಿಕೆಗೆ ಗದಗ ಸಾಹಿತ್ಯ ಸಮ್ಮೇಳನ ಪಾತ್ರವಾಯಿತು.
ಪ್ರತಿಧ್ವನಿಸಿದ ನೈಸ್ ವಿವಾದ
ನೈಸ್ ಯೋಜನೆಗೆ ಹೆಚ್ಚುವರಿ ಭೂಮಿ ನೀಡಲ್ಲ. ಕೆಲವರು ಅನಗತ್ಯವಾಗಿ ಅಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಸರಕಾರ ರೈತರ ಪರ ಕೆಲಸ ಮಾಡುತ್ತಿದ್ದು, ನೈಸ್ ಯೋಜನೆಯಲ್ಲಿ ರೈತರ ಭೂಮಿ ವಶಪಡಿಸಿಕೊಂಡಿದ್ದರೆ, ಅದನ್ನು ವಾಪಸ್ ನೀಡುವ ಕ್ರಮ ಕೈಗೊಳ್ಳಲಾಗುವುದು ಎಂದು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಗದಗಿಗೆ ಆಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.