ಕೆರೆಗಳ ಆಧುನೀಕರಣಕ್ಕೆ ವಿಶ್ವಬ್ಯಾಂಕ್ ಸಾಥ್
ರೈತರ ಸಮಸ್ಯೆಯನ್ನು ಆಲಿಸಿದ ಜಲಸಂಪನ್ಮೂಲ ಸಚಿವರು ರಾಜ್ಯ ಸರ್ಕಾರವು ನೀರಾವರಿ ಕ್ಷೇತ್ರಕ್ಕೆ ಪ್ರಮುಖ ಆದ್ಯತೆ ನೀಡಿದ್ದು ತೀವ್ರ ನೀರಿನ ಅವಶ್ಯಕತೆ ಇರುವ ಬರ ಪೀಡಿತ ಪ್ರದೇಶಗಳಿಗೆ ನೀರಾವರಿ ಕಲ್ಪಿಸಲು ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ನೀರಿನ ಸಮರ್ಪಕ ನಿರ್ವಹಣೆ ಮಾಡುವ ಮೂಲಕ ಸಾಧ್ಯವಿರುವ ಎಲ್ಲಾ ಪ್ರದೇಶಗಳಿಗೂ ನೀರಾವರಿ ಕ್ಷೇತ್ರವನ್ನು ವಿಸ್ತರಿಸಲು ಸರ್ಕಾರ ಮುಂದಾಗಿರುವ ವಿಷಯವನ್ನು ರೈತ ನಾಯಕರಿಗೆ ತಿಳಿಸಿದರು.
ನೀರು ಸಂಗ್ರಹಕ್ಕಿಂತ ನೀರು ನಿರ್ವಹಣೆಗೆ ತಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ಈ ನಿಟ್ಟಿನಲ್ಲಿ ನೀರಿನ ಹರಿವಿನ ಪ್ರಮಾಣವನ್ನು ನಿಖರವಾಗಿ ತಿಳಿಸುವ ಎಲೆಕ್ಟ್ರೋ ಫ್ಲೋ ಸಿಸ್ಟಂ ಅನ್ನು ಅಳವಡಿಸಲಾಗುತ್ತಿದೆ. ರೈತರಿಗೆ ನೀರಿನ ಬಳಕೆ ಬಗ್ಗೆ ಅರಿವು ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ನೀರು ಬಳಕೆದಾರರ ಸಹಕಾರ ಸಂಘಗಳ ಬಲವರ್ಧನೆಗೆ ಕಾನೂನು ತಿದ್ದುಪಡಿ ಮಾಡಲು ನಿರ್ಧರಿಸಿದ್ದು ಇದರಿಂದ ಉತ್ತಮ ನೀರು ನಿರ್ವಹಣೆ ಸಾಧ್ಯವಾಗಲಿದೆ ಬಸವರಾಜ ಬೊಮ್ಮಾಯಿ ಹೇಳಿದರು.
ಬಯಲುಸೀಮೆಯ ಕೆರೆಗಳ ದುರಸ್ತಿ ಮತ್ತು ಹೂಳು ಎತ್ತುವುದಕ್ಕೆ ಈ ಸರ್ಕಾರ ಆದ್ಯತೆ ನೀಡುತ್ತಿದ್ದು, ವಿಶ್ವ ಬ್ಯಾಂಕ್ ಸಹಯೋಗದಲ್ಲಿ 3900 ಕೆರೆಗಳ ಆಧುನೀಕರಣ ಕಾರ್ಯ ಈ ವರ್ಷ ಆರಂಭಗೊಳ್ಳಲಿದೆ. ಸ್ಥಳೀಯ ರೈತರ ನೇತೃತ್ವದಲ್ಲಿ ಕೆರೆ ಅಭಿವೃದ್ಧಿ ಸಮಿತಿ ರಚಿಸಿ ರೈತರೇ ಈ ಯೋಜನೆಗಳ ಉಸ್ತುವಾರಿ ಹೊಣೆಹೊರುವಂತೆ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೋಳ ರೈತ ನಾಯಕರಿಗೆ ತಿಳಿಸಿದರು.