ಶೋಭಾಗೆ ಯಾವೂರು ಎಡ್ಡೆ ಮಾರಾಯ್ರೆ?
ಮಂತ್ರಿಮಂಡಲಕ್ಕೆ ಶೋಭಾ ಅವರನ್ನು ಮತ್ತೆ ಕರೆಸಿಕೊಂಡರೆ ಮಂತ್ರಿ ಪದವಿ ಆಕಾಂಕ್ಷಿಗಳು ಮತ್ತು ಹಲವು ಶಾಸಕರುಗಳು ಅಸಮಾಧಾನ- ಗೊಳ್ಳಬಹುದು. ಹಾಗೆ ಮಾಡಿ ಸರ್ಕಾರವನ್ನು ಮತ್ತೆ ಅಸ್ಥಿರಗೊಳಿಸುವ ಬದಲು ಶೋಭಾ ಅವರನ್ನು ಪಕ್ಷದ ಸೇವೆಗೆ ಬಳಸಿಕೊಳ್ಳುವುದು ಉತ್ತಮ ಎಂದು ಸಂಘ ಪರಿವಾರ ಮತ್ತು ಬಿಜೆಪಿ ಪ್ರಮುಖರು ಅನೇಕ ದಿನಗಳಿಂದ ಅಂದುಕೊಳ್ಳುತ್ತಲೇ ಇದ್ದಾರೆ.
ಈ ಚಿಂತನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಮ್ಮತಿಸಿದ್ದಾರೆಂದೂ ಒಂದು ವರ್ಗ ಹೇಳುತ್ತಿದ್ದರೆ ಶೋಭಾ ಅವರನ್ನು ಕರ್ನಾಟಕ ಸೇವೆಯಿಂದ ಬಿಟ್ಟುಕೊಡಲು ಯಡ್ಡಿ ತಯಾರಿಲ್ಲ ಎಂದು ಇನ್ನೊಂದು ವರ್ಗ ಹೇಳುತ್ತಿದೆ. ಶೋಭಾ ಅವರು ರಾಷ್ಟ್ರೀಯ ಮಟ್ಟದಲ್ಲಿ ಸೇವೆ ಸಲ್ಲಿಸುಸುವುದರ ಮೂಲಕ ರಾಜಕಾರಣದಲ್ಲಿ ಎತ್ತರಕ್ಕೆ ಬೆಳೆಯಬೇಕು ಎಂಬುದು ಕೆಲವರ ನಿಲುವು. ದಿಲ್ಲಿಗೆ ಹೋಗುವುದು ಬೇಡ, ತವರು ಕರ್ನಾಟಕದಲ್ಲೇ ಇರಲಿ ಎಂಬುದು ಅವರ ಅಭಿಮಾನಿಗಳ ಒಲವು.
ಮೂಲತಃ ಸಂಘ ಪರಿವಾರದ ಸಕ್ರಿಯ ಸದಸ್ಯೆಯಾಗಿರುವ ಶೋಭಾ ಅವರಿಗೆ ಸಚಿವ ಸ್ಥಾನ ಕಳೆದುಕೊಂಡ ನಂತರ ಸಾರ್ವಜನಿಕವಾಗಿ ಮತ್ತು ಉನ್ನತ ನಾಯಕರಿಂದ ಸಹಾನುಭೂತಿ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಬಜೆಟ್ ಅಧಿವೇಶನದ ನಂತರ ಸಂಪುಟ ಪುನಾರಚನೆ ಸಂದರ್ಭದಲ್ಲಿ ಪುನಃ ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳುವ ಬಗ್ಗೆ ಮಾತೂ ಕೇಳಿ ಬಂದಿತ್ತು.
ಅದೇನೇ ಇರಲಿ, ಸಚಿವ ಸ್ಥಾನ ಕಳೆದುಕೊಂಡ ನಂತರ ಶೋಭಾ ಅವರು ಅಧಿಕಾರ ರಾಜಕೀಯದ ಆಸೆಯನ್ನು ಪ್ರಕಟಿಸುವ ಒಂದೇ ಒಂದು ಮಾತನ್ನೂ ಆಡದಿರುವುದು ಅವರ ವ್ಯಕ್ತಿ ವರ್ಚಸ್ಸಿಗೆ ಮತ್ತು ರಾಜಕೀಯ ಭವಿಷ್ಯಕ್ಕೆ ಶುಭಸೂಚನೇಯೇ ಆಗಿದೆ.