ಬಿಟಿ ಬದನೆ ನಿರ್ಧಾರ ರೈತರಿಗೆ ಬಿಡಿ: ಮುಜಂದಾರ್ ಷಾ
ಖಾಸಗಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಬಿಟಿ ಬೆಳೆಯ ಸಾಧಕ- ಬಾಧಕಗಳನ್ನು ವೈಜ್ಞಾನಿಕವಾಗಿ ಪರಾಮರ್ಶಿಸಬೇಕು. ಈ ವಿಚಾರಕ್ಕೆ ಭಾವನಾತ್ಮಕ ಸ್ಪರ್ಶನೀಡಿ, ಆ ವಿಚಾರವನ್ನು ಉತ್ತುಂಗಕ್ಕೊಯ್ದಮೇಲೆ ವಿಷಯದ ವಸ್ತುನಿಷ್ಠ ಚರ್ಚೆ ಅಸಾಧ್ಯ ಎಂದು ಹೇಳಿದರು. ವಂಶವಾಹಿನಿ ಬದಲಾಯಿಸಿದ ತಳಿಯ ಆಹಾರ ಬೆಳೆಯ ಪರಿಣಾಮಗಳ ಕುರಿತು ಅಧ್ಯಯನ ಕೈಗೊಳ್ಳುವ ವ್ಯವಸ್ಥೆಯೊಂದಿದೆ. ಆ ಎಲ್ಲ ಪರೀಕ್ಷೆ ನಡೆದು, ಬಿಟಿ ಬದನೆಯಿಂದ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಇಲ್ಲ ಎನ್ನುವುದು ಖಾತ್ರಿಯಾದ ಬಳಿಕವೇ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ಬಯೋಕಾನ್ ಅಧ್ಯಕ್ಷೆ ಹೇಳಿದರು.
ಇವಿಷ್ಟರ ಹೊರತಾಗಿಯೂ ಬಿಟಿ ಬದನೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದರೆ ಅದು ವ್ಯವಸ್ಥೆಯ ಲೋಪ. ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಪರಿಸರ ಸಚಿವ ಜೈರಾಮ್ ರಮೇಶ್ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವ ಆಶಾಭಾವನೆಯಿದೆ. ಅಷ್ಟಕ್ಕೂ ಬಿಟಿ ಬದನೆ ಒಂದು ಆಯ್ಕೆಯೇ ಹೊರತು, ಕಡ್ಡಾಯವಲ್ಲ ಎಂದೂ ಮಜುಂದಾರ್ ಷಾ ಹೇಳಿದರು. ಬಿಟಿ ಹತ್ತಿಯಂತೆಯೇ ಬಿಟಿ ಬದನೆ ಸಹ ರೈತರ ಆಯ್ಕೆಯಾಗಲಿ. ಅದರಲ್ಲಿ ಲಾಭ ಕಂಡುಬದಂರೆ ರೈತರು ಬಳಸುತ್ತಾರೆ. ಇಲ್ಲವಾದರೆ ಬಿಡುತ್ತಾರೆ. ಈ ಸಂಬಂಧ ಬೇರೆಯವರ ಮಧ್ಯಸ್ಥಿಕೆ ಅನವಶ್ಯಕ ಎಂದು ಬಯೋಕಾನ್ ಅಧ್ಯಕ್ಷೆ ಕಿರಣ್ಮಜುಂದಾರ್ ಷಾ ಸ್ಪಷ್ಟಪಡಿಸಿದರು.