ಮೃತ್ಯುಂಜಯನಾಗಿ ಹೊರಬಂದ ಮಲ್ಲಯ್ಯ
ಬಹುಮಹಡಿ ಕಟ್ಟಡದ ಜೀವರಕ್ಷಣೆಯ ಕಾರ್ಯಾಚರಣೆ ಬುಧವಾರದಂದು ನಡೆಸಿದ ಅಗ್ನಿಶಾಮಕ ದಳ ಅವಶೇಷದಡಿಯಲ್ಲಿ ಬದುಕುಳಿದಿರುವ ಯಾವುದೇ ಸೂಚನೆ ಸಿಗದೇ ಕಾರ್ಯಚರಣೆಯನ್ನು ಅಂತಿಮಗೊಳಿಸಿದ್ದರು. ಆದರೆ ಇಂದು ನಡೆದ ಕಾರ್ಯಾಚರಣೆಯಲ್ಲಿ ಮಲಯ್ಯ ಅವರು ಪವಾಡ ಸದೃಶ್ಯ ರೀತಿಯಲ್ಲಿ ಸಾವಿನಿಂದ ಪಾರಾಗಿದ್ದಾರೆ. ರಾಮ ನಾಮ ಜಪ ದಿಂದ ಬದುಕಿದೆ . ಕುಡಿಯಲು ಬಿಂದಿಗೆ ನೀರಿತ್ತು ಅಷ್ಟೆ. ಎಲ್ಲಾ ದೇವರ ದಯೆ ಎಂದ ಮಲ್ಲಯ್ಯ, ಕಟ್ಟಡದ ಅವಶೇಷದಡಿಯಲ್ಲಿ ಇನ್ನೂ ಮೂರು ಮಂದಿ ಜೀವಂತವಾಗಿರುವ ಸಾಧ್ಯತೆಯಿದೆ ಎಂದಿದ್ದಾರೆ. ಮಹಿಳೆಯ ಶವವನ್ನು ಹೊರತೆಗೆಯಲಾಗಿದೆ. ಆದರೆ ಇದು ಮಲ್ಲಯ್ಯ ಅವರ ಪತ್ನಿ ನಾಗಮ್ಮ ಅವರ ಶವ ಎಂದು ಶಂಕೆ ವ್ಯಕ್ತವಾಗಿದೆ. ಇನ್ನುಳಿದವರ ಪತ್ತೆ ಕಾರ್ಯ ನಡೆದಿದೆ.
ಮಲ್ಲಯ್ಯನ ಪವಾಡ-ಸೋಮಶೇಖರ ರೆಡ್ಡಿ: ಬಳ್ಳಾರಿ ಕಟ್ಟಡ ಅವಶೇಷದಡಿಯಲ್ಲಿ ಕಳೆದ ಎಂಟು ದಿನಗಳವರೆಗೆ ಸಿಲುಕಿದ್ದ ಮಲ್ಲಯ್ಯ ಬದುಕಿ ಉಳಿದದ್ದು ನಿಜಕ್ಕೂ ಪವಾಡ ಎಂದು ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಅವಶೇಷಗಳಡಿಯಲ್ಲಿ ಇನ್ನೂ ಕೆಲವರು ಜೀವಂತವಾಗಿರುವ ಸಾಧ್ಯತೆ ಇದ್ದಿರುವುದಾಗಿ ಈ ಸಂದರ್ಭದಲ್ಲಿ ತಿಳಿಸಿದ ಅವರು, ಅವರಿಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿರುವುದಾಗಿ ಹೇಳಿದರು.
ಜನವರಿ 26ರಂದು ಸಂಭವಿಸಿದ ಬಹುಮಹಡಿ ಕಟ್ಟಡ ದುರಂತದಲ್ಲಿ ಸುಮಾರು 27ಮಂದಿ ಸಾವನ್ನಪ್ಪಿದ್ದರು. ಮಂಗಳವಾರ ಅಂತಿಮ ಕಾರ್ಯಾಚರಣೆ ಎಂಬಂತೆ ಇಡೀ ಕಟ್ಟಡವನ್ನು ನೆಲಸಮಗೊಳಿಸಲಾಗಿತ್ತು. ಪ್ರತಿದಿನ ಮೃತದೇಹಗಳನ್ನೇ ಹೊರತೆಗೆಯಲಾಗುತ್ತಿತ್ತು. ಅಲ್ಲದೇ, ಕಟ್ಟಡದ ಅವಶೇಷದಡಿಯಲ್ಲಿ ಸಿಲುಕಿದವರು ಸಾವನ್ನಪ್ಪಿರುವುದಾಗಿಯೇ ಎಲ್ಲರೂ ನಂಬಿದ್ದರು. ಆದರೆ ಪವಾಡ ಎಂಬಂತೆ ಇಂದು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಮಲ್ಲಯ್ಯ ಎಂಬ ಕಾರ್ಮಿಕ ಜೀವಂತವಾಗಿ ಪತ್ತೆಯಾಗುವ ಮೂಲಕ ರಕ್ಷಣಾ ಸಿಬ್ಬಂದಿ ಸೇರಿದಂತೆ ಸಾರ್ಜಜನಿಕರು ಅಚ್ಚರಿಗೆ ಒಳಗಾಗುವಂತ ಘಟನೆ ನಡೆಯಿತು.