ಇಂಗ್ಲಿಷ್ ಪತ್ರಿಕೆಗಳಿಂದ ರಾಜ್ಯಕ್ಕೆ ದ್ರೋಹ
ಯಾವುದೇ ರಾಜ್ಯದ ಯಾವುದೇ ಮಾಧ್ಯಮಗಳು ಅಲ್ಲಿನ ಸ್ಥಳೀಯ ಸುದ್ದಿಗಳಿಗೆ, ಅಲ್ಲಿನ ಒಳಿತನ್ನು ಬಿಂಬಿಸುವುದಕ್ಕೆ, ಅವರಿಗಾದ ಅನ್ಯಾಯದ ಪ್ರತಿಭಟನೆಗೆ ವೇದಿಕೆ ಒದಗಿಸುವುದಕ್ಕೆ ಒಟ್ಟಾರೆ ಆ ರಾಜ್ಯದ ಆಗುಹೋಗುಗಳಿಗೆ ಸ್ಪಂದಿಸಿ ಬದ್ಧವಾಗಿರಬೇಕಾದದ್ದು ಸಹಜವಾದದ್ದೆ.
ಆದರೆ ಇದಕ್ಕೆ ವಿರುದ್ಧವಾಗಿರುವುದು ನಮ್ಮ ಕರ್ನಾಟಕದ ಇಂಗ್ಲೀಷ್ ಮಾಧ್ಯಮಗಳು. "ಅಪ್ಪಟ ಪ್ರತಿಭೆಗಳಾದ ವಿನಯ್ ಕುಮಾರ್ ಮತ್ತು ಮನೀಷ್ ಪಾಂಡೆ ಯಾಕೆ ಹೊರಗುಳಿದರು", "ವಿಜಯನಗರದ ಕೃಷ್ಣದೇವರಾಯರ 500 ನೇ ವರ್ಷಾಚರಣೆ" ಹೀಗೆ ಕರ್ನಾಟಕದ ಯಾವುದೇ ಪ್ರಮುಖ ವಿಷಯಗಳು "ಯಾವುದೇ ಟೈಮ್ಸ್ " ನಲ್ಲಿ ಮುಖಪುಟದ ಸುದ್ಧಿಯಾಗಲಿಲ್ಲ.
ಆದರೆ ಕೃಷ್ಣದೇವರಾಯ ಕುರಿತಾದ ಬಣ್ಣ ಬಣ್ಣದ "ಜಾಹೀರಾತು" ಮಾತ್ರ ಈ ಪತ್ರಿಕೆಗಳಲ್ಲಿ ಕಂಡು ಬಂದದ್ದು ಸತ್ಯ!ಬೆಂಗಳೂರಿನ ಇಂಗ್ಲೀಷ್ ಪತ್ರಿಕೆಗಳಿಗೂ ಕನ್ನಡಕ್ಕೂ ಒಂದು ರೀತಿಯ ಎಣ್ಣೆ ಸಿಗೇಕಾಯಿ ಬಾಂಧವ್ಯವೆ! ಬೆಂಗಳೂರಿನಲ್ಲಿ ಕನ್ನಡ ಮಾತ್ರ ಏಕಿದೆ? ಬೆಂಗಳೂರಿನಲ್ಲಿ ಕನ್ನಡಿಗರಿರುವುದೇ ಶೇಕಡ 30 ಮಂದಿ, ವಲಸಿಗರು ಕನ್ನಡ ಕಲಿಯಬೇಕಾದ ಅವಶ್ಯಕತೆಯಿಲ್ಲ ಎಂಬ ಸುದ್ಧಿಗಳಿಗೆ ಪ್ರಚಾರ ನೀಡುವುದಕ್ಕೆ ಈ ಪತ್ರಿಕೆಗಳು ಮರೆಯುವುದಿಲ್ಲ.
ಇದು ಹೀಗ್ಯಾಕೆ ಎಂದು ನಮ್ಮ ಇಂಗ್ಲೀಷ್ ಮಾಧ್ಯಮದವರನ್ನು ವಿಚಾರಿಸಿ. "ಸಂಕುಚಿತರಾಗಬೇಡಿ" "ವಿಶ್ವ ಮಾನವರಾಗಿ" ಎಂದು ಬುದ್ಧಿವಾದ! ಸಿಗುವುದು ಗ್ಯಾರಂಟಿ. ಇವರ ಬುದ್ಧಿವಾದವನ್ನು ನಾವು ಒಪ್ಪಿಕೊಳ್ಳುವುದಾದರೆ ಗುಜರಾತ್ ನ ಇಂಗ್ಲೀಷ್ ಮಾಧ್ಯಮದವರು ಸಂಕುಚಿತರೆ?