ಬಿಟಿ ಬದನೆಯನ್ನು ಆಧ್ಯಾತ್ಮವೂ ಒಪ್ಪದು
ಬಿಟಿ ಬದನೆ ವಿರುದ್ಧ ಕರ್ನಾಟಕವೂ ಸೇರಿದಂತೆ ದೇಶದ ನಾನಾ ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ರೈತರು, ಕೃಷಿ ತಜ್ಞರು ಮತ್ತು ಸಾಮಾಜಿಕ ಕಳಕಳಿ ಪ್ರದರ್ಶಿಸುವ ಅನೇಕರು ಈ ಬದನೆ ಕಾಯಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಶ್ರೀರವಿಶಂಕರ್ ಬಿಟಿ ಬದನೆ ಬಗ್ಗೆ ಸೊಲ್ಲೆತ್ತುವುದರೊಂದಿಗೆ ಬಿಟಿಗೆ ಆಧ್ಯಾತ್ಮ ವಲಯದಿಂದಲೂ ಪ್ರತಿರೋಧ ಬಂದಂತಾಗಿದೆ.
ಪರಿಸರ ಮತ್ತು ಭಾರತೀಯ ಜನತೆಯ ಆರೋಗ್ಯದ ಮೇಲೆ ಬಿಟಿ ಬದನೆ ಉಂಟುಮಾಡುವ ಅಪಾಯವನ್ನು ಸಮಗ್ರವಾಗಿ ಅಭ್ಯಸಿಸದೆ ವಾಣಿಜ್ಯ ವಲಯಕ್ಕೆ ಅದು ಕಾಲಿಡಬಾರದು ಎಂದು ಅವರು ಭಾನುವಾರ ಭುವನೇಶ್ವರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಒತ್ತಾಯಿಸಿದರು.
ಒಣ ಭೂಮಿ ಕೃಷಿ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ಭಾನುವಾರ ಹೈದರಾಬಾದಿನಲ್ಲಿ ಏರ್ಪಡಿಸಲಾಗಿದ್ದ ಒಂದು ಸಾರ್ವಜನಿಕ ಸಲಹಾ ಸಭೆಯಲ್ಲಿ ಕೇಂದ್ರ ಪರಿಸರ ಸಚಿವ ಜೈರಾಮ್ ರಮೇಶ್ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಬಿಟಿ ಬದನೆಯ ಬಗೆಗೆ ಅಂತಿನ ನಿರ್ಧಾರವನ್ನು ಕೇಂದ್ರ ಸರಕಾರ ಇದೇ ಫೆ 10 ರ ನಂತರ ಪ್ರಕಟಿಸುವ ನಿರೀಕ್ಷೆ ಇದೆ.