ಅವ್ಯವಸ್ಥೆಯ ಆಗರವಾಗಿರುವ ವಿಷ್ಣು ಸಮಾಧಿ ಸ್ಥಳ
ಬೆಂಗಳೂರು, ಜ. 31 : ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಕಳೆದುಕೊಂಡು ತಿಂಗಳಾಗುವಹೊತ್ತಿಗೆ ಉತ್ತರಹಳ್ಳಿ ರಸ್ತೆಯ ಅಭಿಮಾನ್ ಸ್ಟುಡಿಯೋದಲ್ಲಿರುವ ಅವರ ಅಂತ್ಯಸಂಸ್ಕಾರ ನಡೆಸಿದ ಸ್ಥಳ ಅವ್ಯವಸ್ಥೆಯ ಆಗರವಾಗಿ ಪರಿವರ್ತಿತವಾಗಿದ್ದು, ಅಭಿಮಾನಿಗಳು ಮತ್ತೆ ರೊಚ್ಚಿಗೇಳುವಂತೆ ಮಾಡಿದೆ.
ಅಭಿನವ ಭಾರ್ಗವ ತೀರಿಕೊಂಡ ದಿನವೇ ವಿಷ್ಣು ಅಂತ್ಯಸಂಸ್ಕಾರಕ್ಕಾಗಿ ಎರಡು ಎಕರೆ ಜಮೀನು ನೀಡಿ ಅಭಿಮಾನ್ ಸ್ಟುಡಿಯೋ ಅಭಿಮಾನ ಮೆರೆದಿತ್ತು. ಸರಕಾರ ಕೂಡ ವಿಷ್ಣು ಅಂತ್ಯಸಂಸ್ಕಾರಕ್ಕೆ ಸರ್ವರೀತಿಯ ಭದ್ರತೆ ನೀಡಿ, ಸ್ಮಾರಕ ನಿರ್ಮಾಣಕ್ಕೆ 10 ಕೋಟಿ ರು. ನೀಡುವುದಾಗಿ ವಾಗ್ದಾನ ನೀಡಿ ಸಹಸ್ರಾರು ಅಭಿಮಾನಿಗಳ ಹರ್ಷಕ್ಕೆ ಕಾರಣವಾಗಿತ್ತು.
ಜನೆವರಿ 30ಕ್ಕೆ ಸ್ಫುರದ್ರುಪಿ ನಟ ಇಹಲೋಕ ತ್ಯಜಿಸಿ ಒಂದು ತಿಂಗಳು. ಕಳೆದ ವರ್ಷದ ಡಿಸೆಂಬರ್ 30ರಿಂದ ಇಂದಿನವರೆಗೆ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋಗೆ ಭೇಟಿ ನಮನ ಸಲ್ಲಿಸುತ್ತಿದ್ದಾರೆ. ಪ್ರತಿದಿನ ಅನ್ನಸಂತರ್ಪಣೆ ಕೂಡ ನಡೆಯುತ್ತಿದೆ.
ವಿಷ್ಣು ಅವರ ಸ್ಮಾರಕಕ್ಕೆ ಪೂರ್ವಭಾವಿ ಸಿದ್ಧತೆಗಳಿರಲಿ ಸಮಾಧಿಗೆ ಸೂಕ್ತ ರಕ್ಷಣೆಯನ್ನೂ ನೀಡಿಲ್ಲ. ಸಮಾಧಿಯ ಮೇಲೆ ಹಾಕಿರುವ ಶಾಮಿಯಾನಾ ಕೂಡ ಆಗಲೋ ಈಗಲೋ ಅನ್ನುವಂತಾಗಿದೆ. ಜೋರಾಗಿ ಗಾಳಿ ಬೀಸಿದರೆ ಕಿತ್ತುಹೋಗುವಂಥ ಸ್ಥಿತಿ ತಲುಪಿದೆ. ಜನರಿಗೆ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಅಲ್ಲಿ ಕಲ್ಪಿಸಿಲ್ಲ. ದೂರದಿಂದ ಬರುವ ಹೆಣ್ಣುಮಕ್ಕಳ ಶೌಚಕ್ಕಾಗಿ ಶೌಚಾಯಲಯದ ವ್ಯವಸ್ಥೆ ಮಾಡಿಲ್ಲ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸ್ಥಳ ನೋಡಲು ಬರುವ ಜನರಿಗಾಗಿ ಇಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ. ಇನ್ನು ಸ್ಮಾರಕ ನಿರ್ಮಿಸುವುದು ಕನಸಿನ ಮಾತೇ ಸರಿ ಎಂದು ಅಭಿಮಾನಿಯೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ. ಸರಕಾರದ ದಿವ್ಯ ನಿರ್ಲಕ್ಷ್ಯ ಹೀಗೇ ಮುಂದುವರಿದರೆ ಅಭಿಮಾನಿಗಳು ಹೋರಾಟದ ಹಾದಿ ಹಿಡಿಯದೇ ಅನ್ಯ ಮಾರ್ಗವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಇನ್ನಾದರೂ ಸರಕಾರ ಕರ್ನಾಟಕದ ಹೆಮ್ಮೆಯ ನಟ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಗಮನ ಹರಿಸುವುದೆ?