ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಈಶ್ವರಪ್ಪ ಆಯ್ಕೆ
ಜ 30ರಂದು ಮಲ್ಲೇಶ್ವರಂ ಆಟದ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಸಮ್ಮುಖದಲ್ಲಿ ನಿರ್ಗಮಿಸುತ್ತಿರುವ ಅಧ್ಯಕ್ಷ ಸದಾನಂದ ಗೌಡ ಈಶವರಪ್ಪ ನವರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ. ಗುರುವಾರ ( ಜ 28 ) ಸಂಜೆ ಈಶ್ವರಪ್ಪ ಇಂಧನ ಖಾತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಖಾಸಗಿ ನಿವಾಸದಲ್ಲಿ ಜ 20ರಂದು ನಡೆದ ಪಕ್ಷದ ಉನ್ನತ ಮಟ್ಟದ ಸಭೆಯಲ್ಲಿ ಈಶ್ವರಪ್ಪ ಅವರನ್ನು ಆಯ್ಕೆ ಮಾಡುವ ಕುರಿತು ಅಂತಿಮ ತಿರ್ಮಾನ ಕೈಗೊಳ್ಳಲಾಗಿತ್ತು. ಸಿ ಟಿ ರವಿ, ಲಿಂಬಾವಳಿ, ಪ್ರಹ್ಲಾದ್ ಜೋಷಿ ಮುಂತಾದವರು ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿನಡೆಸಿದ್ದರು.
ಮುಖ್ಯವಾಗಿ ಪಕ್ಷದಲ್ಲಿನ ಆಂತರಿಕ ಭಿನ್ನಮತವನ್ನು ಮಟ್ಟ ಹಾಕುವ ಗುರುತರ ಜವಾಬ್ದಾರಿ ನೂತನ ಅಧ್ಯಕ್ಷರ ಮೇಲಿದೆ. ಅಲ್ಲದೇ, ಕುರುಬ ಸಮುದಾಯಕ್ಕೆ ಪ್ರಾತಿನಿಧ್ಯ ನಿಡುವ ಮೂಲಕ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸಡ್ಡು ಹೊಡೆಯಲು ಈಶ್ವರಪ್ಪ ಅವರಿಗೆಮಣೆ ಹಾಕಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಲಿಂಗಾಯತ, ಒಕ್ಕಲಿಗ ಜನಾಂಗದ ನಂತರ ಕುರುಬರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೆಎಸ್ ಈಶ್ವರಪ್ಪ ಅವರ ಆಯ್ಕೆಯನ್ನು ಮಾಜಿ ಪ್ರಧಾನಿ ಜೆಡಿಎಸ್ ಮುಖಂಡ ದೇವೇಗೌಡ ಅವರು ಸ್ವಾಗತಿಸಿದ್ದಾರೆ.