ದೇಶಾದ್ಯಂತ ಸಡಗರ, ಸಂಭ್ರಮದಿಂದ ಗಣತಂತ್ರ
ಉಗ್ರರು ದಾಳಿ ಮಾಡುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಕೊಟ್ಟ ಮಾಹಿತಿಯ ಹಿನ್ನೆಯಲ್ಲಿ ದೇಶದಾದ್ಯಂತ ಇಂದು ಕಟ್ಟೆಚ್ಚರ ವಹಿಸಲಾಗಿತ್ತು. ಉಗ್ರರು ದಾಳಿಯನ್ನು ಎದುರಿಸಲು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್ ಎಸ್ ಜಿ) ದೇಶಾದ್ಯಂತ ಹದ್ದ್ದಿನ ಕಣ್ಣಿಟ್ಟಿದೆ.
ನವದೆಹಲಿಯ ವಿಜಯ್ ಚೌಕ್ ಮತ್ತು ಕೆಂಪುಕೋಟೆಯ ಎಂಟು ಕಿ.ಮೀ ಮಾರ್ಗದಲ್ಲಿ 15 ಸಾವಿರ ಮಂದಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಭೂ ಮತ್ತು ವಾಯುಮಾರ್ಗದ ದಾಳಿಯನ್ನು ಎದುರಿಸಲು ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿತ್ತು.
ಭದ್ರತಾ ಏರ್ಪಾಟುಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ದೆಹಲಿ ಪೊಲೀಸ್ ಕಮೀಷನರ್ ವೈ ಎಸ್ ಯಾದವ್, ಜನವರಿ 25ರ ಸೋಮವಾರ 192 ಪೊಲೀಸ್ ಕಂಪನಿಗಳನ್ನು ಹಾಗೂ ಅರೆಸೇನಾ ಸಿಬ್ಬಂದಿಯನ್ನು ಪರೇಡ್ ಮಾರ್ಗದಲ್ಲಿ ನಿಯೋಜಿಸಲಾಗಿತ್ತು ಎಂದು ತಿಳಿಸಿದರು.
ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಇಡಲಾಗಿತ್ತು. ರೈಲ್ವೆ ಹಾಗೂ ಬಸ್ ನಿಲ್ದಾಣಗಳಲ್ಲಿ, ಜನ ದಟ್ಟಣೆ ಇರುವ ಮಾರುಕಟ್ಟೆಯಂತಹ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಪಹರೆಯನ್ನು ಹಾಕಲಾಗಿತ್ತು ಎಂದು ಯಾದವ್ ವಿವರ ನೀಡಿದರು. ಭದ್ರತಾ ಕ್ರಮಗಳ ಜೊತೆಗೆ ಮೆಟ್ರೊ ರೈಲು ಪ್ರಯಾಣವನ್ನು ನಿಲ್ಲಿಸಲಾಗಿತ್ತು. ಇಂದಿರಾಗಾಂಧಿ ಹಾಗೂ ಪಾಲಂ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು.
ಈ ಬಾರಿಯ ಗಣತಂತ್ರ ದಿನಾಚರಣೆಗೆ ಮುಖ್ಯ ಅತಿಥಿಯಾಗಿ ದಕ್ಷಿಣ ಕೊರಿಯಾದ ಅಧ್ಯಕ್ಷ ಲೀಮ್ಯಾಂಗ್ ಆಗಮಿಸಿದ್ದರು. ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಉಪರಾಷ್ಟ್ರಪತಿ ಮೊಹಮ್ಮದ್ ಹಮೀದ್ ಅನ್ಸಾರಿ, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಸೇರಿದಂತೆ ಅನೇಕ ರಾಜಕಾರಣಿಗಳು 60ನೇ ಗಣತಂತ್ರ ದಿನಾಚರಣೆಯನ್ನು ಕಣ್ತುಂಬಿಕೊಂಡರು.