ಸಂಸ್ಕೃತವನ್ನು ಉಳಿಸಿ ಬೆಳಸಿ: ಕಾಗೇರಿ
ಅನುದಾನದ ಬಗ್ಗೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ರಾಜ್ಯದಲ್ಲಿ ಸಂಸ್ಕೃತ ಪ್ರಸಾರಕ್ಕೆ ಉತ್ತೇಜನ ನೀಡಲು ಹೆಚ್ಚು ಸಹಕಾರ ಕೊಡುವಂತೆ ಕೇಳಿಕೊಳ್ಳಲಾಗಿದೆ ಎಂದರು. ಸಂಸ್ಕೃತ ಪಾಠಶಾಲೆ, ಕಾಲೇಜುಗಳಿಗೆ ಗ್ರಂಥಾಲಯ ಒದಗಿಸಲಾಗುವುದು. ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ನೀಡಲಾಗುವುದು. ಅಧ್ಯಾಪಕರಿಗೆ ಸೂಕ್ತ ತರಬೇತಿ ಕೊಡಲಾಗುವುದು. ಸಂಶೋಧನೆ, ಅಧ್ಯಯನಕ್ಕೆ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ಸಂಸ್ಕೃತದಲ್ಲಿ ಸಾಧನೆ ಮಾಡಿದವರನ್ನು ಅಭಿನಂದಿಸುವ ಈ ಘಟಕೋತ್ಸವ 7 ವರ್ಷ ನಡೆದಿರಲಿಲ್ಲ. ಬಿಜೆಪಿ ಸರಕಾರ ಬಂದಾಗಿನಿಂದ ಪುನರಾರಂಭ ಮಾಡಲಾಗಿದೆ. ಹೀಗಾಗಿ ಸತತ 2 ನೇ ಬಾರಿಗೆ ಈ ಸುಸಂದರ್ಭ ಒದಗಿ ಬಂದಿದೆ. ಸಂಸ್ಕೃತಕ್ಕಾಗಿ ನಿಧಿ ಸ್ಥಾಪಿಸಲು ಚಿಂತನೆ ನಡೆದಿದೆ. ಈಗಾಗಲೇ ವಿದ್ಯಾರ್ಥಿ ವೇತನವನ್ನು 45 ರೂ. ದಿಂದ 75 ರೂ. ಗೆ ಹೆಚ್ಚಿಸಲಾಗಿದೆ ಎಂದರು. ವಿದೇಶಿಯರು ಸಂಸ್ಕೃತ ಕಲಿಯಲು ಆಸಕ್ತಿ ತೋರುತ್ತಿದ್ದಾರೆ. ಸಂಸ್ಕೃತದಲ್ಲಿ ಎಲ್ಲ ಭಾಷೆಯ ಸತ್ವ, ತತ್ವಜ್ಞಾನ ಅಡಗಿದೆ. ಹೀಗಾಗಿ ಪಾಲಕರು ಮಕ್ಕಳನ್ನು ಈ ನಿಟ್ಟಿನಲ್ಲಿ ಅಣಿಗೊಳಿಸಬೇಕು ಎಂದರು.
ಕೈಲಾಸಾಶ್ರಮದ ಶ್ರೀ ಆದಿದೇವಾನಂದ ಸ್ವಾಮೀಜಿ ಮಾತನಾಡಿ, ಕೆಲವರು ಅನಗತ್ಯವಾಗಿ ಸಂಸ್ಕೃತವನ್ನು ವಿರೋಧಿಸುತ್ತಿದ್ದಾರೆ. ಇದರಿಂದ ಯಾವ ಸಾಧನೆ ಆಗುವುದಿಲ್ಲ. ಸಂಸ್ಕೃತ ಬೇಡ ಎನ್ನುವವರು ಉರ್ದು ವಿಶ್ವವಿದ್ಯಾಲಯಕ್ಕಾಗಿ ಸಲಹೆ ನೀಡಿದ್ದಾರೆ. ಈ ರೀತಿಯ ದ್ವಂದ್ವ ಏಕೆ ಎಂದು ಪ್ರಶ್ನಿಸಿದರು. ಒಟ್ಟು 114 ವಿದ್ಯಾರ್ಥಿಗಳಿಗೆ ಪದವಿ/ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ರ.ಗೋ. ನಡಾದೂರ ಪಾಲ್ಗೊಂಡಿದ್ದರು.