ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರನ್ನು ಹೊರದಬ್ಬಲಿದೆ
ದಾಳಿ ಮಾಡುತ್ತಿರುವವರು ಆರೆಸ್ಸೆಸ್,ಹಿಂದೂ ಸಂಘಟನೆಗಳು, ಸರ್ಕಾರ ಇದುವರೆವಿಗೂ ದುಷ್ಕರ್ಮಿಗಳ ಮೇಲೆ ಕ್ರಮ ಕೈಗೊಂಡಿಲ್ಲ.ಸರ್ಕಾರ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ಆ ಭಾಗದ(ಮೈಸೂರು) ಪೊಲೀಸರು ನಿಷ್ಕ್ರಿಯರಾಗಿದ್ದಾರೆ. ಚರ್ಚ್ ದಾಳಿ ನಿರಂತರವಾಗಿ ನಡೆಯುತ್ತಿದ್ದರೂ ಒಬ್ಬನನ್ನು ಬಂಧಿಸಲು ಈ ಸರ್ಕಾರಕ್ಕೆ ತಾಕತ್ತಿಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಜನರ ರಕ್ಷಣೆಯಲ್ಲಿ ಸರ್ಕಾರ ವಿಫಲವಾಗಿದ್ದರೆ. ಜನ ಸಾಮಾನ್ಯರನ್ನು ರಾಜಕೀಯ ದಾಳ ಗಳನ್ನಾಗಿ ಉಪಯೋಗಿಸುತ್ತಿದ್ದಾರೆ. ಧಾರ್ಮಿಕ ಕೇಂದ್ರಗಳನ್ನು ರಕ್ಷಿಸಲು ಆಗದಿದ್ದರೆ, ಯೋಗ್ಯತೆ ಇಲ್ಲದಿದ್ದರೆ ಅಡಳಿತ ಬಿಟ್ಟು ತೊಲಗಿ ಎಂದು ಉಗ್ರಪ್ಪ ಕಿಡಿ ಕಾರಿದ್ದಾರೆ. ನಾಡಿನ ಜನತೆ ಈ ಸಂದರ್ಭದಲ್ಲಿ ಶಾಂತಿಯಿಂದ ವರ್ತಿಸಬೇಕು. ದುಷ್ಕರ್ಮಿಗಳ ಸಂಚಿಗೆ ಬಲಿಯಾಗಿ ಗಲಭೆ ಎಬ್ಬಿಸಬಾರದು ಎಂದು ಉಗ್ರಪ್ಪ ಕಿವಿಮಾತು ಹೇಳಿದರು.
ಡಿಕೆಶಿ ಕಿಡಿಕಿಡಿ: ಒಬ್ಬರನ್ನು ಬಂಧಿಸಿಲ್ಲ ಎಂದರೆ, ಸರ್ಕಾರ ಕೂಡ ದಾಳಿಗೆ ಸಹಾಯ ಮಾಡುತ್ತಿದೆ. ಆನೇಕಲ್, ಮಂಗಳೂರು, ದಾಳಿ ಪ್ರಕರಣ ಕಣ್ಮುಂದೆ ಇದೆ. ದಾಳಿ ಬಗ್ಗೆ ರಾಜ್ಯಪಾಲರಿಗೆ ದೂರು ಸಲ್ಲಿಸುತ್ತೇವೆ. ಸರ್ಕಾರ ಅಲ್ಪಸಂಖ್ಯಾತರನ್ನು ರಕ್ಷಿಸುವ ಭರವಸೆ ಇಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಇಲ್ಲದಿದ್ದ ಚರ್ಚ್ ಮೇಲಿನ ದಾಳಿ ಬಿಜೆಪಿ ಆಡಳಿತಕ್ಕೆ ಬರುತ್ತಿದ್ದಂತೆ ಆರಂಭವಾಗಲು ಕಾರಣವೇನು ಎಂಬುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಭಾನುವಾರದಂದು ಆನೇಕಲ್ ತಾಲೂಕಿನ ಹುಲಿಮಂಗಲ ಗ್ರಾಮದ ನಡುಬೀದಿ ತಿಮ್ಮಾರೆಡ್ಡಿ ಲೇಔಟ್ ನಲ್ಲಿ ಕ್ರಿಶ್ಚಿಯನ್ ಸಮುದಾಯ ಭಾನುವಾರ ಏರ್ಪಡಿಸಿದ್ದ ಭಾರತಕ್ಕಾಗಿ ಪ್ರಾರ್ಥನೆ' ಸಮಾರಂಭದಲ್ಲಿ ಕೂಡ ಬಿಜೆಪಿ ಸರ್ಕಾರದ ವಿರುದ್ಧ ಡಿಕೆಶಿ ಕಿಡಿ ಕಾರಿದ್ದರು. ಕಾಂಗ್ರೆಸ್ ಸಮುದಾಯದ ಬೆಂಬಲಕ್ಕಿದ್ದು,ಎಲ್ಲ ಧರ್ಮ, ಜಾತಿ ಬಗ್ಗೆ ನಂಬಿಕೆ ಇಟ್ಟುಕೊಂಡಿದೆ. ಕ್ರೈಸ್ತರೊಡನೆ ಕಾಂಗ್ರೆಸ್ ಇದೆ ಎಂದು ಘೋಷಿಸಿದ್ದರು.