ರಾಜಕೀಯದಲ್ಲಿ ಭಾನುವಾರವೆಂಬುದೇ ಇಲ್ಲ!
ಬಿಜೆಪಿಯಲ್ಲಿ ಟಿಕೆಟ್ ಲಾಬಿ : ಫೆಬ್ರವರಿ 21ರಂದು ನಡೆಯಲಿರುವ ಬಿಬಿಎಂಪಿ ಚುನಾವಣೆ ಟಿಕೆಟಿಗಾಗಿ ಬಿಜೆಪಿಯಲ್ಲಿ ಲಾಬಿ ಶುರುವಾಗಿದೆ. ಟಿಕೆಟ್ ಆಕಾಂಕ್ಷಿಗಳು ಪೂಜೆ ಮಾಡಿಸುವ ನೆಪದಲ್ಲಿ ನಗರದ ಗಿರಿನಗರದಲ್ಲಿರುವ ರಾಮಚಂದ್ರಾಪುರದ ಮಠಕ್ಕೆ ಭೇಟಿ ನೀಡಿ ರಾಘವೇಶ್ವರ ಸ್ವಾಮೀಜಿಯನ್ನು ಭೇಟಿ ಮಾಡಿದ್ದಾರೆ. ಚಿಕ್ಕಮಗಳೂರು ಶಾಸಕ ಸಿಟಿ ರವಿ ಕೂಡ ರಾಘವೇಶ್ವರ ಸ್ವಾಮೀಜಿಯನ್ನು ಭೇಟಿ ಮಾಡಿರುವುದು ಅನೇಕರ ಹುಬ್ಬೇರುವಂತೆ ಮಾಡಿದೆ. ಕೆಆರ್ ಪುರಂನ ಗಾಯತ್ರಿ ಚಂದ್ರಶೇಖರ್, ವಿಜಯನಗರದ ಕೃಷ್ಣಪ್ಪ ಮುಂತಾದವರು ಕೂಡ ಸ್ವಾಮೀಜಿಯನ್ನು ಭೇಟಿ ಮಾಡಿ ಟಿಕೆಟಿಗಾಗಿ ಲಾಬಿ ನಡೆಸಿದ್ದಾರೆ.
ಯಡಿಯೂರಪ್ಪ ನೇಕಾರ ನಾಯಕ : ನೆಲಮಂಗಲ ತಾಲೂಕಿನ ಕೆಂಪಲಿಂಗನಹಳ್ಳಿಯಲ್ಲಿ ಇಂದು ನಡೆದ ನೇಕಾರ ಜನಾಂಗದ ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿ ಅವರಿಗೆ ಬೆಳ್ಳಿ ಖಡ್ಗ ನೀಡಿ ಮತ್ತು 'ನೇಕಾರ ನಾಯಕ' ಎಂದು ಬಿರುದು ನೀಡಲಾಯಿತು. ಈ ಸಮಯದಲ್ಲಿ ಮಾತನಾಡಿದ ಯಡಿಯೂರಪ್ಪ, ದೇವಾಂಗ ಪೀಠಕ್ಕಾಗಿ ಮುಂದಿನ ಬಜೆಟ್ ನಲ್ಲಿ 4 ಕೋಟಿ ರು. ಮೀಸಲಿಡುವುದಾಗಿ ಹೇಳಿದರು ಮತ್ತು ದೇವಾಂಗ ಜನಾಂಗಕ್ಕೆ 10 ಉಪ-ಜನಾಂಗಗಳನ್ನು ಸೇರಿಸುವುದಾಗಿ ಭರವಸೆ ನೀಡಿದರು.
ಬಯೋಟೆಕ್ ಪಾರ್ಕ್ : ತೋಟಗಾರಿಕೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಬೆಳಗಾವಿ, ಶಿವಮೊಗ್ಗ, ಬೆಂಗಳೂರು, ಮೈಸುರು ಮತ್ತು ಬೀದರ್ ಸೇರಿದಂತೆ ರಾಜ್ಯದಲ್ಲಿ 12 ಹೊಸ ಬಯೋಟೆಕ್ ಪಾರ್ಕ್ ಗಳನ್ನು ನಿರ್ಮಿಸಲಾಗುವುದು ಎಂದು ತೋಟಗಾರಿಕಾ ಸಚಿವ ಉಮೇಶ ಕತ್ತಿ ಅವರು ಮೈಸೂರಿನಲ್ಲಿ ಘೋಷಿಸಿದ್ದಾರೆ. ರೈತರು ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಅನುವಾಗುವಂತೆ ಮೈಸೂರು, ಹಾಸನ, ಮಂಡ್ಯ, ಹಾಸನ, ಚಾಮರಾಜನಗರ, ಕೆಆರ್ ನಗರಗಳಲ್ಲಿ ಹೂವು ಹರಾಜು ಮಾರುಕಟ್ಟೆಯನ್ನು ನಿರ್ಮಿಸುವುದಾಗಿ ಹೇಳಿದರು. ಮಾವು ಉತ್ಪನ್ನ ಹೆಚ್ಚಿಸುವ ಉದ್ದೇಶದಿಂದ ಕೋಲಾರದಲ್ಲಿ 10 ಕೋಟಿ ರು. ವೆಚ್ಚದಲ್ಲಿ ಮಾವು ಸಂಶೋಧನಾ ಕೇಂದ್ರ ನಿರ್ಮಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಬಿಜೆಪಿ ಸಮನ್ವಯ ಸಮಿತಿ : ಇಂದು ನಡೆಯುತ್ತಿರುವ ಬಿಜೆಪಿ ಸಮನ್ವಯ ಸಮಿತಿಯಲ್ಲಿ ನೂನತ ರಾಜ್ಯಾಧ್ಯಕ್ಷರ ಆಯ್ಕೆ, ಬಿಬಿಎಂಪಿ ಚುನಾವಣೆ, ತೆರವಾಗಿರುವ ವಿಧಾನಪರಿಷತ್ ಸ್ಥಾನಕ್ಕೆ ಅಭ್ಯರ್ಥಿಯ ಆಯ್ಕೆ, ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ, ಸಂಪುಟಕ್ಕೆ ಹೊಸಬರ ಸೇರ್ಪಡೆ ಕುರಿತಂತೆ ಚರ್ಚೆ ನಡೆಸಲಾಗುತ್ತಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೆಎಸ್ ಈಶ್ವರಪ್ಪ ಆಯ್ಕೆಯಾಗುವುದು ಹೆಚ್ಚೂ ಕಡಿಮೆ ಖಚಿತವಾಗಿದೆ. ಅವರ ಆಯ್ಕೆಯಿಂದ ಬರಿದಾಗುತ್ತಿರುವ ಇಂಧನ ಖಾತೆಗೆ ಯಾರನ್ನು ತರಬೇಕೆಂಬ ಬಗ್ಗೆಯೂ ಚರ್ಚೆ ನಡೆಯಲಿದೆ. ಈ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಹೆಸರು ಕೇಳಿಬರುತ್ತಿವೆ.
ಸಿದ್ದು ವಿರುದ್ಧ ಸದಾನಂದ ಗೌಡ ಕಿಡಿ : 'ಬಿಜೆಪಿ ಜುಟ್ಟು ಈಶ್ವರಪ್ಪ ಕೈಗೆ ಸಿಕ್ರೆ ಅಧೋಗತಿ' ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಕ್ಕೆ ಕೆರಳಿರುವ ಸದಾನಂದ ಗೌಡ, ಬಿಜೆಪಿ ಬಗ್ಗೆ ಚಿಂತನೆ ಇವರಿಗ್ಯಾಕೆ, ಇವರಿಗೆ ಜ್ಯೋತಿಷಿ ಪಟ್ಟ ಕೊಟ್ಟವರು ಯಾರು ಎಂದು ಮಂಗಳೂರಿನಲ್ಲಿ ನಗುಮೊಗದಲ್ಲೇ ಕೆಂಡಕಾರಿದ್ದಾರೆ. ಬಿಜೆಪಿ ಜುಟ್ಟು, ಜನಿವಾರ ಈಶ್ವರಪ್ಪ ಕೈಗೆ ಸಿಕ್ಕರೆ ಬಿಜೆಪಿ ಸರಕಾರದ ಪತನ ಶತಸಿದ್ಧ ಎಂದು ಸಿದ್ದು ಶನಿವಾರ ಲೇವಡಿಯಾಡಿದ್ದರು.