ಮಹಾರಾಜ ಕಾಲೇಜಿನಲ್ಲಿ ರಾಜ್ಯಮಟ್ಟದ ಪುಸ್ತಕ ಮೇಳ
ನಾಲ್ಕು ದಿನಗಳು ಬೆಂಗಳೂರಿನಲ್ಲಿ ನಡೆದ ಪುಸ್ತಕ ಮೇಳದಲ್ಲಿ ಸುಮಾರು ಎಪ್ಪತ್ತು ಮಳಿಗೆಗಳನ್ನು ತೆರೆಯಲಾಗಿತ್ತು. ಒಂದು ಕೋಟಿ ಇಪ್ಪತ್ತೈದು ಲಕ್ಷ ವಹಿವಾಟು ನಡೆಯಿತು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಬೆಟ್ಟಸೂರ ಮಠ, ಕನ್ನಡ ಜಾಗೃತಿ ಸಮಿತಿ ಸದಸ್ಯ .ಬಿ.ವಿಶ್ವನಾಥ್ ಮುಂತಾದವರು ಹಾಜರಿದ್ದರು.
ಈ ಪುಸ್ತಕ ಮೇಳದಲ್ಲಿ ರಾಜ್ಯದಿಂದ ನೂರಕ್ಕೂ ಹೆಚ್ಚು ಪ್ರಕಾಶಕರು ಭಾಗವಹಿಸುತ್ತಿದ್ದು ನೂರು ಮಳಿಗೆಗಳನ್ನು ತೆರೆಯಲಾಗುತ್ತಿದೆ. ಒಂದು ಮಳಿಗೆಗೆ ಇಬ್ಬರಿಗೆ ವ್ಯವಸ್ಥೆ ಮಾಡಲಾಗುವುದಲ್ಲದೆ ಜಿಲ್ಲಾಡಳಿತದ ವತಿಯಿಂದ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಹೇಳಿದ ಅವರು ಪ್ರತಿಯೊಬ್ಬ ಪ್ರಕಾಶಕರು ಕನಿಷ್ಠ 10ರಷ್ಟು ರಿಯಾಯಿತಿಯನ್ನು ಕೊಡಬೇಕು. ಪುಸ್ತಕ ಮೇಳದಲ್ಲಿ ಪದವಿಪೂರ್ವ, ಪದವಿ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಡಳಿತದಿಂದ ಸೂಚನೆ ನೀಡಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಕನ್ನಡ ಪುಸ್ತಕಗಳನ್ನು ಕೊಂಡು ಓದಬೇಕೆಂದರು.
ಪುಸ್ತಕ ಮೇಳದ ಧ್ಯೇಯ " ಕನ್ನಡ ಕನ್ನಡಿಗ, ಕರ್ನಾಟಕ'' ಎಂಬುದಾಗಿದ್ದು ಕನ್ನಡವನ್ನು ಕುರಿತ ಎಲ್ಲಾ ಮಾಹಿತಿಗಳು ಕನ್ನಡಿಗರ ಸಾಹಸ, ಸಂಕಷ್ಟ ಕುರಿತ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ದೊರೆಯುವ ಅವಕಾಶವನ್ನು ಪುಸ್ತಕಮೇಳದಲ್ಲಿ ಕಲ್ಪಿಸಲಾಗಿದೆ. ಪುಸ್ತಕ ಮೇಳದಲ್ಲಿ ಒಂಭತ್ತು ಅಕಾಡೆಮಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮನೋಹರ ಗ್ರಂಥ ಮಾಲೆ, ಸಾರ್ವಜನಿಕ ಪ್ರಕಾಶನ, ಸಂವಹನ ಪ್ರಕಾಶನ, ಸಪ್ನಬುಕ್ಹೌಸ್, ಎಲ್ಲಾ ವಿಶ್ವವಿದ್ಯಾನಿಲಯಗಳ ಪ್ರಸಾರಾಂಗ ಮುಂತಾದ ಪ್ರಕಾಶಕರು ಸೇರಿದಂತೆ ವಿವಿಧ ಪ್ರಕಾಶಕರು ಭಾಗವಹಿಸುತ್ತಿದ್ದಾರೆ. ಈ ಪುಸ್ತಕ ಮೇಳದಲ್ಲಿ ಅಂತರರಾಷ್ಟ್ರೀಯ ಗುಣiಟ್ಟವನ್ನು ಕಾಪಾಡಬೇಕೆಂಬುದು ನಮ್ಮ ಉದ್ದೇಶ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಮಹಾಪೌರರು, ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಕಾರ್ಯದರ್ಶಿ ಜಯರಾಮರಾಜೇ ಅರಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್, ಜಿಲ್ಲಾಧಿಕಾರಿ ಪಿ.ಮಣಿವಣ್ಣನ್ ಮುಂತಾದ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದ ಅವರು ಸನ್ಮಾನ್ಯ ಮುಖ್ಯಮಂತ್ರಿಗಳನ್ನು ಸಹ ಕಾರ್ಯಕ್ರಮಕ್ಕೆ ಆಹ್ವಾನಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿ ಸಮಾರೋಪ ಸಮಾರಂಭಕ್ಕೆ ಸುತ್ತೂರು ಮಠದ ಶಿವರಾತ್ರೀಶ್ವರ ದೇಶೀಕೇಂದ್ರ ಮಹಾಸ್ವಾಮೀಜಿಯವರನ್ನು ಆಹ್ವಾನಿಸಲಾಗುವುದು ಎಂದರು.