ಅಂಬಾಡಹಳ್ಳಿಯಲ್ಲಿ ವಿಚಿತ್ರ ಮೇಕೆಮರಿ ಜನನ
ಆದರೆ, ಈ ವಿಚಿತ್ರ ಮೇಕೆ ಮರಿಯ ಜನನ ಜನತೆಯಲ್ಲಿ ಜಿಜ್ಞಾಸೆಗೆ ಕಾರಣವಾಗಿದೆ. ಕೆಲವರು ಇದು ದೈವಲೀಲೆ ಎಂದು ವ್ಯಾಖ್ಯಾನಿಸುತ್ತಿದ್ದರೆ, ಕೆಲವರು ಇದು ಗರ್ಭಾವಸ್ಥೆಯಲ್ಲಾದ ಸಮಸ್ಯೆಯಿಂದ ಹುಟ್ಟಿದ್ದು ಎಂದು ವೈಜ್ಞಾನಿಕ ಕಾರಣ ನೀಡುತ್ತಿದ್ದಾರೆ. ಆದರೂ ಜನ ಮರುಳೋ ಜಾತ್ರೆ ಮರಳೋ ಎಂಬಂತೆ ವಿಚಿತ್ರ ಕುರಿಮರಿಯ ವೀಕ್ಷಣೆಗೆ ಸುತ್ತಮುತ್ತಲಿನ ಜನತೆ ಆಗಮಿಸುತ್ತಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣದ ಅಂಬಾಡಹಳ್ಳಿಯ ಬಸವರಾಜುರವರ ಮನೆ ಮೇಕೆ ಬಾಯಿಯಲ್ಲಿ ಕಣ್ಣಿರುವ ಮರಿಗೆ ಜನ್ಮನೀಡಿ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಎರಡನೇ ಬಾರಿ ಮರಿ ಹಾಕಿರುವ ಈ ಮೇಕೆಯ ಗರ್ಭದಲಿ ಜನಿಸಿರುವ 3 ಮರಿಗಳಲ್ಲಿ ಎರಡು ಮೇಕೆ ಮರಿಗಳು ಆರೋಗ್ಯವಾಗಿವೆ. ಒಂದು ಮೇಕೆ ಮರಿಗೆ ಹಣೆಯ ಕೆಳಗಡೆ ಇರಬೇಕಾದ ಕಣ್ಣು ಬಾಯಿಯ ಒಸಡಿನ ಸ್ಥಳದಲ್ಲಿದೆ.
ಜಾನುವಾರುಗಳ ಸಂತತಿಯಲ್ಲಿ ಸಾಮಾನ್ಯವಾಗಿ ಇಂತಹ ಘಟನೆಗಳು ಸಂಭವಿಸುವುದಿಲ್ಲ ಆದರೆ ಅತ್ಯಪರೂಪ ಎನ್ನುವಂತೆ ಈ ರೀತಿಯ ಮರಿಗಳು ಜನನವಾಗುತ್ತವೆ. ಕಳೆದ ವರ್ಷ ಮಾಗಡಿ ತಾಲ್ಲೂಕಿನ ಮರಳಗೊಂಡಲ ಗ್ರಾಮದಲ್ಲೂ ಎರಡು ತಲೆಯ ಕುರಿ ಮರಿ ಜನನವಾಗಿತ್ತು.
ಎಂಬ್ರಿಯೋಜೆನಿಸಿಸ್ನ ನರಮಂಡಲದಲ್ಲಿ ಸಮಸ್ಯೆ ಉದ್ಭವವಾದಾಗ ಈ ರೀತಿಯ ವಿಚಿತ್ರ ಮೇಕೆ ಮರಿಗಳು ಜನನವಾಗುತ್ತದೆ. ಈ ರೀತಿಯ ವಿಚಿತ್ರ ಮರಿಗಳು 10 ಲಕ್ಷದಲ್ಲಿ ಒಂದು ಜನಿಸುತ್ತವೆ, ಈ ರೀತಿಯ ಮರಿಯನ್ನ "ಮಾನ್ಸ್ಟ್ರ್ ಬೈಸೆಫೆಲಿ" ಎಂದು ಕರೆಯಲಾಗುತ್ತದೆ. ಮೇಕೆಗಳ ಗರ್ಭಾವಸ್ಥೆಯಲ್ಲಿ ಗರ್ಭಕೋಶದಲ್ಲಾಗುವ ಏರುಪೇರಿನಿಂದ ಈ ರೀತಿಯ ವಿಚಿತ್ರ ಮೇಕೆ ಮರಿಗಳ ಜನನವಾಗುತ್ತವೆ ಎಂದು ಪಶುವೈದ್ಯಕೀಯ ಇಲಾಖೆಯ ಜಂಟಿ ನಿರ್ದೇಶಕ ಡಾ.ಸಿದ್ದಯ್ಯನವರು ಹೇಳುತ್ತಾರೆ.
ಆದರೆ ವೈಜ್ಞಾನಿಕ ಕಾರಣವನ್ನು ನಂಬದ ಕೆಲ ಗ್ರಾಮಸ್ಥರು ಕಲಿಗಾಲದ ಅಂತ್ಯದಲ್ಲಿ ಹೀಗೆಲ್ಲ ಸಂಭವಿಸುತ್ತದೆಂದು ಭಯಭಕ್ತಿಗಳಿಂದ ಮೇಕೆ ಮರಿಯನ್ನು ನೋಡುತ್ತಿದ್ದಾರೆ. ಗ್ರಾಮಸ್ಥರಲ್ಲಿ ಈರೀತಿಯ ಮೂಢನಂಬಿಕೆಗಳಿರುವುದು ಹೊಸತೇನೂ ಅಲ್ಲ.