ಬಿಬಿಎಂಪಿ ಟೆಂಡರ್ ರದ್ದು, ಯಡಿಯೂರಪ್ಪ
ಸಾರ್ವಜನಿಕರಲ್ಲಿ ಗೊಂದಲ ಉಂಟಾಗಬಾರದು ಎಂಬ ಕಾರಣಕ್ಕೆ 3,400 ಕೋಟಿ ರುಪಾಯಿ ಮೊತ್ತದ ಟೆಂಡರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಶನಿವಾರ ಹೇಳಿದರು. ಪಾಲಿಕೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಟೆಂಡರ್ ಪ್ರಕ್ರಿಯೆಗೆ ಮರುಚಾಲನೆ ನೀಡಲಾಗುವುದು. ಅದರೆ ಪ್ರತಿಪಕ್ಷಗಳಿಗೆ ಹೆದರಿ ಈ ನಿರ್ಣಯ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು ಅಭಿವೃದ್ಧಿಯನ್ನು ಸಹಿಸದ ಪ್ರತಿಪಕ್ಷಗಳು ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಬೊಬ್ಬೆ ಹಾಕುತ್ತಿವೆಯ ಎಷ್ಟೇ ಅಡ್ಡಿಯುಂಟು ಮಾಡಿದರೂ ಮಹಾನಗರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ನಿರ್ಧಾರ ಕೈ ಬಿಡುವುದಿಲ್ಲ ಎಂದು ಘೋಷಿಸಿದರು. ಟೆಂಡರ್ ಪ್ರಕ್ರಿಯೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಇಡೀ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿದೆ. ಪಾಲಿಕೆ ಆಯುಕ್ತ ಭರತ್ ಲಾಲ್ ಮೀನಾ ಪ್ರಾಮಾಣಿಕ ಅಧಿಕಾರಿ. ಆದರೆ, ಈ ಯಾವುದನ್ನೂ ಸಹಿಸದ ಪ್ರತಿಪಕ್ಷದವರು ವಿನಾ ಕಾರಣ ಟೀಕೆ ಟಿಪ್ಪಣಿಗಳಲ್ಲಿ ತೊಡಗಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.