ಸಂಪಂಗಿಯಿಂದ ಫಾರೂಕ್ ಗೆ ಪ್ರಾಣ ಬೆದರಿಕೆ?
ಕೆಜಿಎಫ್ ಶಾಸಕ ವೈ ಸಂಪಂಗಿ ಶಾಸಕರ ಭವನದಲ್ಲೇ ಲೋಕಾಯುಕ್ತ ಬಲೆಗೆ ಸಿಕ್ಕಿಬೀಳಲು ಕಾರಣರಾದ ಫಾರೂಕ್ ಅವರ ಮನವಿ ಇದು. ಪ್ರಕರಣ ವಾಪಸ್ ಪಡೆಯಲು ಒಪ್ಪದ ತಮಗೆ ಸಾವಿನ ಭೀತಿ ಕ್ಷಣಕ್ಷಣಕ್ಕೂ ಎದುರಾಗುತ್ತಿದೆ. ಎಲ್ಲ ಪ್ರಯತ್ನ ಮಾಡಿದರೂ ಭದ್ರತೆ ಸಿಕ್ಕಿಲ್ಲ. ಸಾವು ಖಚಿತವಾಗಿದೆ. ಭ್ರಷ್ಟ ರಾಜಕಾರಣಿ ಕಡೆಯಿಂದ ಸಾಯಲು ತಾನು ಸಿದ್ಧನಿಲ್ಲ ಇಚ್ಛಾಮರಣಕ್ಕೆ ಅನುಮತಿ ನೀಡಿ ಎಂದು ಫಾರೂಕ್ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಪತ್ರ ಬರೆದು ವಿನಂತಿಸಿಕೊಂಡಿದ್ದಾರೆ.
ಶಾಸಕರು ಪೊಲೀಸರನ್ನು ಬಳಿಸಿ ನಕಲಿ ಮೊಕದ್ದಮೆ ನನ್ನ ಮೇಲೆ ದಾಖಲಿಸುತ್ತಿದ್ದಾರೆ. ಕೆಜಿಎಫ್ ಗೆ ಕಾಲಿಡಲು ಆಗುತ್ತಿಲ್ಲ. ದಿನಕ್ಕೊಂದು ಊರು ಸುತ್ತುತ್ತಿದ್ದೇನೆ. ಮೂವರು ಮಕ್ಕಳು ಮತ್ತು ಪತ್ನಿಯರನ್ನು ಚೀನಾಕ್ಕೆ ಕಳಿಸಿದ್ದೇನೆ. ಭ್ರಷ್ಟ ರಾಜಕಾರಣಿಯ ಹಿಂಬಾಲಕರಿಂದ ಬರುತ್ತಿರುವ ಸಾವನ್ನು ತಪ್ಪಿಸಿಕೊಳ್ಳಲು ಓಡಾಡಿ ಸಾಕಾಗಿದೆ. ಆದರೆ, ಗೌರವದ ಸಾವೇ ನನ್ನ ಮುಂದಿರುವ ಆಯ್ಕೆ. ಅದಕ್ಕಾಗಿ ಇಚ್ಛಾಮರಣದ ಕೋರಿಕೆ ಎಂದು ಫಾರೂಕ್ ಗದ್ಗದಿತರಾಗುತ್ತಾರೆ. ಎಲ್ಲಿಗೆ ಬಂತಪ್ಪ ನಮ್ಮ ಸಾಮಾಜಿಕ ವ್ಯವಸ್ಥೆ ಎನ್ನದೇ ವಿಧಿಯಿಲ್ಲ?