ಪರಿಷತ್ ವಿರುದ್ಧವೇ ತಿರುಗಿಬಿದ್ದ ಪ್ರಿಯಾಂಕಾ
ನಂದಿನಿ ಲೇಔಟ್ ನಿವಾಸಿಯಾಗಿರುವ ಪ್ರಿಯಾಂಕಾ ಕಳೆದ ನಾಲ್ಕು ವರ್ಷಗಳಿಂದ ಆನಂದ್ ಎಂಬಾತನನ್ನು ಪ್ರೀತಿಸುತ್ತಿದ್ದರು. ಆದರೆ, ಆನಂದ್ ಪ್ರೀತಿಸುವ ನಾಟಕವಾಡಿ ಆಕೆಯನ್ನು ಗರ್ಭಿಣಿ ಮಾಡಿ ಬೇರೊಂದು ಯುವತಿಯೊಂದು ಮದುವೆ ಮಾಡಿಕೊಂಡಿದ್ದ. ರಾಜಾಜಿನಗರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಮದುವೆ ಮೇಲೆ ಹೋಗಿ ಪ್ರಿಯಾಂಕಾ ಮತ್ತು ಅಕೆ ಸಹೋದರಿಯರು ಗಲಾಟೆ ನಡೆಸಿದ್ದರು. ಈ ಪ್ರಕರಣ ರಾಜ್ಯಾದ್ಯಂತ ಸುದ್ದಿ ಮಾಡಿತ್ತು. ಜೊತೆಗೆ ಪ್ರಿಯಾಂಕಾಗೆ ರಾಜ್ಯದ ಜನತೆ ಅನುಕಂಪ ವ್ಯಕ್ತಪಡಿಸಿದ್ದರು. ಬೆಂಗಳೂರಿನ ಅನೇಕ ಸಂಘ ಸಂಸ್ಥೆಗಳು, ಸ್ತ್ರೀ ಸಂಘಟನೆಗಳು ಪ್ರಿಯಾಂಕಾ ಬೆನ್ನಿಗೆ ನಿಂತಿದ್ದವು. ಆಗ ರಾಜ್ಯ ಮಾನವ ಹಕ್ಕುಗಳ ಅಧ್ಯಕ್ಷ ವಿವೇಕಾನಂದ ಕೂಡ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ನ್ಯಾಯ ಕೊಡಿಸುವ ಮಾತನಾಡಿದರು.
ಆನಂದರಾವ್ ವೃತ್ತದಲ್ಲಿರುವ ಮಾನವ ಹಕ್ಕುಗಳ ಪರಿಷತ್ ಗೆ ಭೇಟಿ ನೀಡಿ ಪ್ರಿಯಾಂಕಾ ಪತ್ರ ಬರೆದುಕೊಟ್ಟಿದ್ದಳು. ಅದರಲ್ಲಿ ಆನಂದ್ ನಿಂದ ನನಗೆ 30 ಲಕ್ಷ ರುಪಾಯಿ ಪರಿಹಾರ ಕೊಡಿಸಬೇಕು ಎಂಬ ಬೇಡಿಕೆ ಇಟ್ಟಿದ್ದರು ಎಂದು ಮಾನವ ಹಕ್ಕುಗಳು ಅಧ್ಯಕ್ಷ ವಿವೇಕಾನಂದ ಅವರು ಹೇಳುತ್ತಾರೆ. ಅಲ್ಲದೇ ಪ್ರಿಯಾಂಕಾ ಬರೆದುಕೊಟ್ಟಿದ್ದ ಪತ್ರವನ್ನು ವಿವೇಕಾನಂದ ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದರು. ಸಮಸ್ಯೆ ಆರಂಭವಾಗಿದ್ದೇ ಅಲ್ಲಿಂದ.
ಭಾರೀ ಹಣ ಕೇಳಿ ಪತ್ರ ಬರೆದುಕೊಟ್ಟಿದ್ದನ್ನು ನಿರಾಕರಿಸಿರುವ ಪ್ರಿಯಾಂಕಾ, ಪತ್ರವನ್ನು ಪರಿಷತ್ ಬಲವಂತದಿಂದ ಬರೆಸಿಕೊಂಡಿದೆ. ಯಾವುದೇ ದುಡ್ಡಿಗಾಗಿ ಈ ಹೋರಾಟ ನಡೆಸುತ್ತಿಲ್ಲ. ಆನಂದನಂಥವನಿಗೆ ಸರಿಯಾದ ಶಿಕ್ಷೆಯಾಗಬೇಕು ಅಷ್ಟೆ ಎಂದು ಪ್ರಿಯಾಂಕಾ ವಾದಿಸುತ್ತಾರೆ. ಈಗ ಬಲವಂತದಿಂದ ಬರೆಸಿಕೊಂಡಿರುವ ಪತ್ರ ಹಿಡಿದು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಇಡೀ ಪ್ರಕರಣದ ದಿಕ್ಕು ತಪ್ಪಿಸಲು ವಿವೇಕಾನಂದ್ ಯತ್ನಿಸುತ್ತಿದ್ದಾರೆ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.