ಪಿಡಿ ದಿನಕರನ್ ಬೆಂಬಲಿಸಿದ ಕೆಜಿ ಬಾಲಕೃಷ್ಣನ್
ಅಕ್ರಮ ಆಸ್ತಿ ಹೊಂದಿದ್ದಕ್ಕಾಗಿ ಅವರ ವಿರುದ್ಧ ಜರುಗಿಸುತ್ತಿರುವ ದೋಷಾರೋಪ ಪ್ರಕ್ರಿಯೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಅವರು, ದಿನಕರನ್ ಅವರನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಭಡ್ತಿ ನೀಡಲು ಶಿಫಾರಸು ನೀಡಿದ ಮೇಲೆ ಅವರ ಮೇಲೆ ಆರೋಪ ಹೊರಿಸಲಾಗಿದೆ ಎಂದು ಹೇಳಿ ದಿನಕರನ್ ಅವರನ್ನು ಬೆಂಬಲಿಸಿದ್ದಾರೆ.
ಮದ್ರಾಸ್ ಹೈಕೋರ್ಟಿನಲ್ಲಿ ನ್ಯಾಯಮೂರ್ತಿಯಾಗಿದ್ದಾಗ ಮತ್ತು ನಂತರ 2008ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾದಾಗ ಅವರ ವಿರುದ್ಧ ಒಂದೇ ಒಂದು ಭ್ರಷ್ಟಾಚಾರದ ಆರೋಪವೂ ಇರಲಿಲ್ಲ. ಆದರೆ, ಸರ್ವೋಚ್ಚ ನ್ಯಾಯಾಲಯಕ್ಕೆ ಭಡ್ತಿ ನೀಡಲು ಅವರು ಹೆಸರು ಪ್ರಸ್ತಾಪವಾದಾಗ ಈ ಆರೋಪಗಳೆಲ್ಲ ಹೊರಬಂದವು ಎಂದು ಬಾಲಕೃಷ್ಣನ್ ಅಭಿಪ್ರಾಯಪಟ್ಟರು.
ಮುಖ್ಯ ನ್ಯಾಯಮೂರ್ತಿಯ ಕಚೇರಿಯನ್ನು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ತರಬೇಕೆಂಬ ಪ್ರಸ್ತಾವನೆಯನ್ನು ತಾವು ವಿರೋಧಿಸಿದ್ದಾಗಿ ಪತ್ರಿಕೆಗಳಲ್ಲಿ ಬಂದಿರುವ ವರದಿಗಳನ್ನು ಅವರು ಸಾರಾಸಗಟಾಗಿ ತಳ್ಳಿಹಾಕಿದರು.
ಸರ್ವೋಚ್ಚ ನ್ಯಾಯಾಲಯದ ಭಡ್ತಿಯನ್ನು ತಡೆಹಿಡಿದಿರುವುದರಿಂದ ದಿನಕರನ್ ಅವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಯಾವುದೇ ಪ್ರಕರಣಗಳನ್ನು ಆಲಿಸುತ್ತಿಲ್ಲ.