ಮಧ್ಯರಾತ್ರಿಯಲ್ಲಿ ಸರಕಾರಿ ಕಾರ್ಯಾಚರಣೆ
ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಕೈಗೊಂಡಿರುವ ಕಾಮಗಾರಿಗಳಿಗೆ ನೀಡಲು ಹಣ ಇಲ್ಲದಿರುವಾಗ ತರಾತುರಿಯಲ್ಲಿ ನಡೆದಿರುವ ಮಧ್ಯರಾತ್ರಿ ಕಾರ್ಯಾಚರಣೆ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ನಡುರಾತ್ರಿ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿರುವ 453 ಕಿಮೀ ಪ್ರಮುಖ ಹಾಗೂ ಉಪರಸ್ತೆಗಳ ನಿರ್ಮಾಣಕ್ಕೆ 2,350 ಕೋಟಿ ರುಪಾಯಿ ಹಾಗೂ ಏಳು ಸಿಗ್ನಲ್ ಫೀ ಕಾರಿಡಾರ್ ನ 1,100 ಕೋಟಿ ರುಪಾಯಿ ಬಜೆಟ್ ನಲ್ಲಿ ಸೇರಿರಲಿಲ್ಲ ಅಥವಾ ಬಜೆಟ್ ನ ನಂತರ ಅಧ್ಯತೆ ಮೇರೆಗೆ ರೂಪಿಸಲಾಗಿರಲಿಲ್ಲ. ಎಲ್ಲದ್ದಕ್ಕಿಂತ ಹೆಚ್ಚಾಗಿ ಎರಡೂ ಯೋಜನೆಗಳಿಗೆ ಹಣವೂ ಯಾವುದೇ ಬಾಬ್ತಿನಲ್ಲಿ ಮೀಸಲಿಟ್ಟಿಲ್ಲ.
ಒಟ್ಟು 3,248 ಕೋಟಿ ರುಪಾಯಿ ವೆಚ್ಚದ 19 ಪ್ಯಾಕೇಜ್ ಗಳ ಕಾಮಗಾರಿಗಳಿಗೆ ಆರ್ಥಿಕ ಬಿಡ್ ಪ್ರಕ್ರಿಯೆಗೆ ಮಂಗಳವಾರ ಚಾಲನೆ ನೀಡಲಾಗಿದೆ. ಸರಕಾರದ ಆದೇಶದಂತೆಯೇ ನಿಯಮಬದ್ಧವಾಗಿ ಕಾರ್ಯನಿರ್ವಹಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಭರತ್ ಲಾಲ್ ಮೀನಾ ತಿಳಿಸಿದ್ದಾರೆ. ಆರ್ಥಿಕ ಬಿಡ್ ಪರಿಶೀಲನೆ ಪ್ರಕ್ರಿಯೆಯನ್ನು ಆರ್ಧಕ್ಕೆ ಸ್ಥಗಿತಗೊಳಿಸಲು ಅವಕಾಶವಿರಲಿಲ್ಲ. ಹಾಗಾಗಿ ರಾತ್ರಿ ಕಳೆದರೂ ಕೆಲಸ ಮಾಡಬೇಕಾದ ಅಗತ್ಯವಿತ್ತು. ಆದರೆ, ಈ ಟೆಂಡರ್ ಪ್ರಕ್ರಿಯೆಯಲ್ಲಿ ಯಾವುದೇ ರೀತಿ ನಿಯಮ ಉಲ್ಲಂಘನೆಯಾಗಿಲ್ಲ ಎಂದು ಹೇಳಿದ್ದಾರೆ.