ಅಂಥ ಘಟನೆ ಕ್ಷಮಾರ್ಹವಲ್ಲ, ಮೋಹನ್ ದಾಸ್ ಪೈ
ಇತ್ತೀಚೆಗೆ ಇನ್ಫಿ ಉದ್ಯೋಗಿಯೊಬ್ಬರು ಪತ್ನಿಯ ಜೊತೆ ಸೇರಿಕೊಂಡು ಮನಗೆಲಸದ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈ ಕೆಲಸವನ್ನು ಯಾರೇ ಮಾಡಿದರೂ ಕ್ಷಮಿಸಲು ಅಸಾಧ್ಯ ಎಂದರು. ಇನ್ಫೋಸಿಸ್ ನಲ್ಲಿ ಲಕ್ಷಕ್ಕೂ ಹೆಚ್ಚು ಸಿಬ್ಬಂದಿಯಿದ್ದಾರೆ. ಹೀಗಾಗಿ ಕೆಲವೊಮ್ಮೆ ಅಹಿತಕರ ಘಟನೆಗಳು ನಡೆಯುತ್ತವೆ. ಆದರೆ, ಅಂತಹ ಪ್ರಕರಣಗಳಲ್ಲಿ ಕಂಡು ಬಂದಲ್ಲಿ ಕಠಿಣ ಕ್ರಮ ಜರುಗಿಸುತ್ತೇವೆ. ಈಗಾಗಲೇ ಆರೋಪಿ ಉದ್ಯೋಗಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದ್ದು ಆತ ಜೈಲಿನಲ್ಲಿದ್ದಾನೆ ಎಂದು ಹೇಳಿದರು.
ಆರೋಪಿ ಉದ್ಯೋಗಿ ವಿರುದ್ದ ಕಂಪನಿ ತನ್ನದೇ ಆದ ತನಿಖೆ ನಡೆಸುತ್ತಿದೆ. ಕಂಪನಿಯ ಸಿಬ್ಬಂದಿಗೆ ಪ್ರತ್ಯೇಕ ನೀತಿ ಸಂಹಿತೆ ಜಾರಿಯಲ್ಲಿದ್ದು, ಅದನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಖಚಿತ ಎಂದು ಪೈ ಸ್ಪಷ್ಟಪಡಿಸಿದರು. ಸರಕಾರಕ್ಕೆ ಭರವಸೆ ನೀಡಿದಂತೆ ಪ್ರವಾಹ ಸಂತ್ರಸ್ಥರಿಗೆ 3 ಸಾವಿರ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಪೈ ಹೇಳಿದರು. ಕೋಲ್ಕತ್ತಾ ಮೂಲದ ಪಲ್ಲಬ್ ಚತ್ರವರ್ತಿ ಎಂಬ ಉದ್ಯೋಗಿ ಮನೆ ಕೆಲಸದ ಬಾಲಕಿಯ ಕಾದು ಎಣ್ಣೆ ಸುರವಿದ ಘಟನೆ ಇತ್ತೀಚೆಗೆ ನಡೆದಿತ್ತು. ಜೊತೆಗೆ ಹಲವು ತಿಂಗಳುಗಳ ಹಿಂದೆ ಗೋಏರ್ ವಿಮಾನದೊಳಗೆ ಹುಸಿಬಾಂಬ್ ಕರೆ ಮಾಡಿದ್ದ ಅಭಿಷೇಕ್ ಗುಪ್ತಾ ಎಂಬ ಉದ್ಯೋಗಿಯ್ನು ಕೂಡ ಸೇವೆಯಿಂದ ಅಮಾನತು ಮಾಡಲಾಗಿದೆ.