ಹಾಕಿ ಆಟಗಾರರಿಗೆ ಪೇಮೆಂಟ್ ಬಾಕಿ!
ಅರ್ಜೆಟಿನಾದಲ್ಲಿ ನಡೆದ ಚಾಂಪಿಯನ್ ಚಾಲೆಂಜ್ ಪಂದ್ಯದಲ್ಲಿ ಭಾಗವಹಿಸಿದ ಆಟಗಾರರಿಗೆ ಕೊಡಬೇಕಿರುವ ಸಂಭಾವನೆ ಹಣವನ್ನು ಈವರೆಗೂ ಕೊಟ್ಟಿಲ್ಲ. ಪಂದ್ಯ ಮುಗಿದು ಅನೇಕ ದಿನಗಳು ಕಳೆದಿವೆ. ಈ ಸಂಬಂಧ ಹಾಕಿ ಇಂಡಿಯಾದ ಅಧ್ಯಕ್ಷ ಎಕೆ ಮಟ್ಟೂ ಅವರಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಅನಿವಾರ್ಯವಾಗಿ ವಿಶ್ವಕಪ್ ಹಾಕಿ ಕ್ರೀಡಾಕೂಟಕ್ಕಾಗಿ ನಡೆಯಲಿರುವ ಅಭ್ಯಾಸ ಪಂದ್ಯಕ್ಕೆ ಭಾಗವಹಿಸಬಾರದು ಎಂದು ಎಲ್ಲ ಆಟಗಾರರು ತೀರ್ಮಾನ ಕೈಗೊಂಡಿದ್ದೇವೆ ಎಂದು ಭಾರತೀಯ ಹಾಕಿ ತಂಡದ ನಾಯಕ ರಾಜ್ ಪಾಲ್ ಸಿಂಗ್ ತಿಳಿಸಿದ್ದಾರೆ.
ಈ ಮುಂಚೆ ಪಂದ್ಯಕ್ಕೂ ಮೊದಲು ಆಟಗಾರರ ಸಂಭಾವನೆಯನ್ನು ನೀಡುತ್ತಿದ್ದರು. ಆದರೆ, ಈ ಸಲ ವಿಳಂಬವಾಗಿದೆ. ಕಾರಣ ಏನು ಎಂಬುದು ನಮಗೆ ತಿಳಿದಿಲ್ಲ. ಹಣ ನೀಡುವವರೆಗೂ ಪಂದ್ಯದಲ್ಲಿ ಭಾಗವಹಿಸುವುದಿಲ್ಲ ಎಂದು ಸಿಂಗ್ ಹೇಳಿದರು. ಮುಂದಿನ ತಿಂಗಳು ಫೆಬ್ರವರಿ 28ರಿಂದ ಮಾರ್ಚ್ 13ರವರೆಗೆ ನವದೆಹಲಿಯಲ್ಲಿ ವಿಶ್ವಕಪ್ ಹಾಕಿ ಕ್ರೀಡಾಕೂಟ ನಡೆಯಲಿದೆ. ವಿಪರ್ಯಾಸದ ಸಂಗತಿಯೆಂದರೆ, ಕ್ರಿಕೆಟ್ ಗಾಗಿ ಕೋಟ್ಯಂತರ ಸುರಿಯುವ ಸರಕಾರಗಳು ಹಾಕಿಗೆ ಮಲತಾಯಿ ಧೋರಣೆ ಅನುಸರಿಸುತ್ತವೆ. ಕುಬೇರ ಕ್ರಿಕೆಟ್ ಆಟಗಾರರ ಮುಂದೆ ಕುಚೇಲ ಹಾಕಿ ಪಾಡು ನೋಡಿದರೆ ಅಯ್ಯೋ ಎನಿಸದಿರದು. ಆಟಗಾರರು ತಮ್ಮ ಸಂಭಾವನೆಗಾಗಿ ಪಂದ್ಯವನ್ನೇ ಬಹಿಷ್ಕರಿಸುವುದು ನಾಚಿಕೆಗೇಡಿನ ಸಂಗತಿಯೇ ಸರಿ.